ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ಅಂಕಿತ ಪುಸ್ತಕದ ‘ವರ್ಷದ ಲೇಖಕಿ’ ದತ್ತಿನಿಧಿ ಪ್ರಶಸ್ತಿಗೆ ಲೇಖಕಿಯರಾದ ಬಾನು ಮುಷ್ತಾಕ್, ಎಚ್.ಎಸ್. ಅನುಪಮಾ ಹಾಗೂ ಪ್ರತಿಭಾ ನಂದಕುಮಾರ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ ₹ 35 ಸಾವಿರ ನಗದು ಒಳಗೊಂಡಿದೆ. ಲೇಖಕಿ ಗೀತಾ ಶೆಣೈ, ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ, ಪ್ರಭಾ ಕಂಬತ್ತಳ್ಳಿ ಹಾಗೂ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಒಳಗೊಂಡ ಸಮಿತಿ 2022, 2023 ಮತ್ತು 2024ನೇ ಸಾಲಿಗೆ ಈ ಆಯ್ಕೆ ಮಾಡಿದೆ.
ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ಕರ್ನಾಟಕ ಲೇಖಕಿಯರ ಸಂಘದಲ್ಲಿ ಈ ದತ್ತಿನಿಧಿ ಸ್ಥಾಪಿಸಿದೆ. ಸಾಹಿತ್ಯದಲ್ಲಿ ಗುರುತರ ಕೆಲಸ ಮಾಡಿದವರನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತಿದೆ.
ಇದೇ 30ರಂದು ಬೆಳಿಗ್ಗೆ 10.30ಕ್ಕೆ ಎನ್.ಆರ್. ಕಾಲೊನಿಯಲ್ಲಿರುವ ಬಿ.ಎಂ.ಶ್ರೀ. ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.