ಬೆಂಗಳೂರು: ‘ಸಿದ್ಧಾಂತಗಳು ಬದುಕನ್ನು ಅರ್ಥಮಾಡಿಕೊಳ್ಳಲು ಇರುವ ಪ್ರೇರಕ ಶಕ್ತಿ. ಪಂಪ, ವಚನಕಾರರು, ಹರಿದಾಸರು, ಕುಮಾರವ್ಯಾಸನಿಗೂ ಸಿದ್ಧಾಂತವಿತ್ತು. ಆದರೆ, ಅವರು ಘೋಷಿಸಿಕೊಂಡಿರಲಿಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಕಿತ ಪುಸ್ತಕದ ‘ವರ್ಷದ ಲೇಖಕಿ’ ದತ್ತಿನಿಧಿ ಪ್ರಶಸ್ತಿಯನ್ನು ಲೇಖಕಿಯರಾದ ಬಾನು ಮುಷ್ತಾಕ್, ಎಚ್.ಎಸ್. ಅನುಪಮಾ ಹಾಗೂ ಪ್ರತಿಭಾ ನಂದಕುಮಾರ್ ಅವರಿಗೆ ಪ್ರದಾನ ಮಾಡಿ, ಮಾತನಾಡಿದರು. ಈ ಪ್ರಶಸ್ತಿಯು ತಲಾ ₹ 35 ಸಾವಿರ ನಗದು ಒಳಗೊಂಡಿದೆ.
‘ನಮ್ಮಲ್ಲಿ ಸಿದ್ಧಾಂತವಿದ್ದರೆ ಸೃಜನಶೀಲತೆಗೆ ಧಕ್ಕೆಯಾಗುತ್ತದೆ ಎಂಬ ವಾದವಿದೆ. ಇದಕ್ಕೆ ಪೂರ್ವಾಗ್ರಹ ಮನಸ್ಥಿತಿಯೇ ಕಾರಣ. ಯಾವುದೇ ಸಿದ್ಧಾಂತ ಸೆರೆಮನೆಯಲ್ಲ. ಆದ್ದರಿಂದ ಬರವಣಿಗೆಯಲ್ಲಿ ತೊಡಗಿರುವವರು ಸಿದ್ಧಾಂತವನ್ನು ಸೆರೆಮನೆ ಅಂದುಕೊಳ್ಳುವುದು, ವಿಮರ್ಶಕರು ಬರಹಗಾರರು ಸೆರೆಮನೆಯಲ್ಲಿದ್ದಾರೆ ಎಂದು ಭಾವಿಸುವುದು ತಪ್ಪು. ಸಿದ್ಧಾಂತದ ಬಗ್ಗೆ ಬದ್ಧತೆ ಇರಬೇಕು. ಬದ್ಧತೆಯು ಪ್ರಾಮಾಣಿಕತೆ ಮತ್ತು ನೈತಿಕತೆಯ ಪ್ರತೀಕ. ಸಿದ್ಧಾಂತವನ್ನು ಕಲೆಯ ಕುಲುಮೆಯಲ್ಲಿ ಕರಗಿಸಿ, ಆಕಾರ ನೀಡಬೇಕು’ ಎಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ, ‘ಪುರುಷ ಪ್ರಧಾನ ಪ್ರಪಂಚದಲ್ಲಿ ಈಗಲೂ ಮಹಿಳೆಯರ ಸ್ಥಿತಿ ಬದಲಾಗಿಲ್ಲ. ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿವೆ. ಅದನ್ನು ಎದುರಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಪೋಕ್ಸೊ ಪ್ರಕರಣ, ಲೈಂಗಿಕ ದೌರ್ಜನ್ಯ, ಹಾದಿ ಬೀದಿಗಳಲ್ಲಿ ‘ಪೆನ್ಡ್ರೈವ್’ ಸೇರಿ ವಿವಿಧ ಪ್ರಕರಣಗಳಿಂದ ಕರ್ನಾಟಕವು ಹಿಂದಿಗಿಂತಲೂ ಹೆಚ್ಚು ಪ್ರಕಾಶಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಲೇಖಕಿ ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.