ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2024–25ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಗೌರವ ಪ್ರಶಸ್ತಿ’ಗೆ ಗಾಯಕಿ ಭಾನುಮತಿ ನರಸಿಂಹನ್ (ಬೆಂಗಳೂರು) ಹಾಗೂ ನೃತ್ಯ ಕಲಾವಿದೆ ಗಾಯತ್ರಿ ಕೇಶವನ್ (ಹಾಸನ) ಅವರನ್ನು ಆಯ್ಕೆ ಮಾಡಲಾಗಿದೆ.
ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ ಸೇರಿದಂತೆ ವಿವಿಧ ವಿಭಾಗಗಳಿಂದ 14 ಕಲಾವಿದರು ಹಾಗೂ ಎರಡು ಸಂಘ–ಸಂಸ್ಥೆಯನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ಹಾಗೂ ವಾರ್ಷಿಕ ಪ್ರಶಸ್ತಿ ತಲಾ ₹ 25 ಸಾವಿರ ನಗದು ಬಹುಮಾನ ಹೊಂದಿದೆ.
ವಾರ್ಷಿಕ ಪ್ರಶಸ್ತಿ: ಕರ್ನಾಟಕ ಸಂಗೀತ ವಿಭಾಗದಿಂದ ಕೋಲಾರದ ವಾನರಾಶಿ ಬಾಲಕೃಷ್ಣ ಭಾಗವತರ್, ಬೆಂಗಳೂರಿನ ಎಸ್.ವಿ. ಗಿರಿಧರ್, ಆನೇಕಲ್ನ ನಾಗಭೂಷಣಯ್ಯ, ಹಿಂದೂಸ್ತಾನಿ ಸಂಗೀತ ವಿಭಾಗದಿಂದ ಕಲಬುರಗಿಯ ಮಹದೇವಪ್ಪ ಪೂಜಾರ, ಬೆಳಗಾವಿಯ ರವೀಂದ್ರ ಕಾಟೋಟಿ, ಉತ್ತರ ಕನ್ನಡದ ಅನಂತ ಭಾಗವತ, ನೃತ್ಯ ವಿಭಾಗದಿಂದ ಬೆಳಗಾವಿಯ ಟಿ. ರವೀಂದ್ರಶರ್ಮ, ಬೆಂಗಳೂರಿನ ಅನುರಾಧ ವಿಕ್ರಾಂತ್, ಸುಗ್ಗನಹಳ್ಳಿ ಷಡಕ್ಷರಿ ಹಾಗೂ ಬಿ.ಆರ್. ಹೇಮಂತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಸುಗಮ ಸಂಗೀತ ವಿಭಾಗದಿಂದ ರಾಯಚೂರಿನ ಸೂಗೂರೇಶ ಅಸ್ಕಿಹಾಳ್, ಬೆಂಗಳೂರಿನ ಎನ್.ಎಲ್. ಶಿವಶಂಕರ್, ಕಥಾಕೀರ್ತನ ವಿಭಾಗದಿಂದ ಕೋಲಾರದ ಕೆ.ಎನ್. ಕೃಷ್ಣಪ್ಪ, ಗಮಕ ವಿಭಾಗದಿಂದ ಹಾಸನದ ರತ್ನಾಮೂರ್ತಿ ಹಾಗೂ ಸಂಘ–ಸಂಸ್ಥೆಗಳ ವಿಭಾಗದಿಂದ ಗದಗದ ವೀರೇಶ್ವರ ಪುಣ್ಯಾಶ್ರಮ, ಬೆಂಗಳೂರಿನ ಸುನಾದ ನಾದ ಕಲ್ಚರಲ್ ಸೆಂಟರ್ ಆಯ್ಕೆಯಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್. ನರೇಂದ್ರ ಬಾಬು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.