ಬೆಂಗಳೂರು: ‘ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 10 ಮತ್ತು 11ನೇ ಘಟಿಕೋತ್ಸವ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆಯಲಿದ್ದು, 1,004 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಅಹಲ್ಯಾ ಎಸ್. ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟಿಕೋತ್ಸವದಲ್ಲಿ ನಾಲ್ಕು ವಿದ್ವಾಂಸರಿಗೆ ವಿದ್ಯಾವಾಚಸ್ಪತಿ (ಡಿ.ಲಿಟ್) ಪದವಿ ಹಾಗೂ 44 ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾವಾರಿಧಿ (ಪಿಎಚ್.ಡಿ) ಪದವಿ ಪ್ರದಾನ ಮಾಡಲಾಗುವುದು. ಸಂಶೋಧನಾ ವಿದ್ಯಾರ್ಥಿಯೊಬ್ಬರಿಗೆ ಸ್ವರ್ಣ ಪದಕ ಪ್ರದಾನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
‘2021–22ನೇ ಶೈಕ್ಷಣಿಕ ಸಾಲಿನಲ್ಲಿ ಆಚಾರ್ಯ (ಎಂ.ಎ) 20, ಶಾಸ್ತ್ರಿ (ಬಿ.ಎ) ಮೂರು ವಿದ್ಯಾರ್ಥಿಗಳು ಸೇರಿದಂತೆ 20 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ಒಟ್ಟು 450 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಗುವುದು’ ಎಂದರು.
‘2022–23ನೇ ಶೈಕ್ಷಣಿಕ ಸಾಲಿನಲ್ಲಿ ಆಚಾರ್ಯ (ಎಂ.ಎ) 20, ಶಾಸ್ತ್ರಿ (ಬಿ.ಎ) 3, ಪಿ.ಜಿ. ಡಿಪ್ಲೊಮಾ ಯೋಗ 2 ಹಾಗೂ ಒಬ್ಬ ಪಿಎಚ್.ಡಿ. ವಿದ್ಯಾರ್ಥಿ ಸೇರಿದಂತೆ 26 ಜನರಿಗೆ ಸ್ವರ್ಣ ಪದಕಗಳನ್ನು ನೀಡಲಾಗುವುದು. ಒಟ್ಟು 554 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮತ್ತು ವಿದ್ವಾಂಸ ಎಚ್.ವಿ. ನಾಗರಾಜರಾವ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ವಿ. ಗಿರೀಶ್ ಚಂದ್ರ, ಕುಲಸಚಿವ (ಮೌಲ್ಯಮಾಪನ) ಕೆ.ರಾಮಕೃಷ್ಣ ಭಟ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.