ಕೆಂಗೇರಿ: ‘ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗಿನ ಪಠ್ಯ ಪುಸ್ತಕಗಳಲ್ಲಿ ಕೆಂಪೇಗೌಡರ ಕೊಡುಗೆಯನ್ನು ಪರಿಚಯಿಸುವ ಪಠ್ಯವಿರಬೇಕು. ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕೆಂಪೇಗೌಡರ ಭಾವಚಿತ್ರ ಪ್ರದರ್ಶಿಸಬೇಕು’ ಎಂದು ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.
ಮಾಗಡಿ ರಸ್ತೆ ತಾವರೆಕೆರೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 515ನೆಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ನಾಡಪ್ರಭು ಕೆಂಪೇಗೌಡರು ಕೇವಲ ಸಾಮಂತ ಅರಸರಂತೆ ಸೀಮಿತ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ನಾಡಿನ ಏಳ್ಗೆಗಾಗಿ ಕೆರೆ ಕಟ್ಟೆ ನಿರ್ಮಾಣಕ್ಕೆ ಆದ್ಯತೆ ನೀಡಿದರು. ದೇಗುಲಗಳ ನಿರ್ಮಾಣ ಮಾಡಿದರು. ಸರ್ವ ಜನಾಂಗದವರಿಗೂ ಸ್ವಾಭಿಮಾನದಿಂದ ಬದುಕುವ ಅವಕಾಶ ಕಲ್ಪಿಸಿದರು‘ ಎಂದು ಹೇಳಿದರು.
ತಾವರೆಕೆರೆಯಲ್ಲಿ ಕೆಂಪೇಗೌಡರ ಬೃಹತ್ ಪುತ್ಥಳಿಯನ್ನು ನಿರ್ಮಿಸುವುದರ ಮೂಲಕ ಎಲ್ಲ ಸಮುದಾಯದವರು ಒಮ್ಮತದಿಂದ ಕೆಂಪೇಗೌಡರ ಜಯಂತಿಯನ್ನು ಆಚರಿಸಬೇಕು ಎಂದು ಸಲಹೆ ನೀಡಿದರು.
ತಾವರೆಕೆರೆ ಕಾಳಪ್ಪ ಸ್ವಾಮಿ ಮಠದ ರೇವಣಸಿದ್ದಯ್ಯ ಸ್ವಾಮೀಜಿ, ತಾವರೆಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆಂಪೇಗೌಡ, ಗ್ರಾಮಸ್ಥರಾದ ಟಿ.ಎಲ್ ಚಂದ್ರಶೇಖರ್, ಶಂಕರೇಗೌಡ, ಟಿ.ಎ. ಮೂರ್ತಿ, ಗಂಗನರಸಯ್ಯ, ಶಿಕ್ಷಕ ಚಿಕ್ಕವೀರಯ್ಯ, ಲಕ್ಷ್ಮೀಶ್ ಗೌಡ, ವೆಂಕಟೇಶ್, ಎಸ್ಎಲ್ಎನ್ ನವೀನ್, ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.