ADVERTISEMENT

ಬೆಂಗಳೂರು | ಮನೆಗೆ ನುಗ್ಗಿ ಮಹಿಳೆ ಕೊಲೆ: ಚಿನ್ನದ ಸರಕ್ಕಾಗಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 10 ಮೇ 2024, 23:53 IST
Last Updated 10 ಮೇ 2024, 23:53 IST
   

ಬೆಂಗಳೂರು: ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು, ಒಂಟಿಯಾಗಿದ್ದ ದಿವ್ಯಾ (36) ಎಂಬುವವರನ್ನು ಕೊಂದು ಚಿನ್ನದ ಸರ ದೋಚಿಕೊಂಡು ಪರಾರಿಯಾಗಿದ್ದಾರೆ.

‘ಕೋನಸಂದ್ರದಲ್ಲಿರುವ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಈ ಕೃತ್ಯ ನಡೆದಿದೆ. ಕೊಲೆ ಹಾಗೂ ಸುಲಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದಿವ್ಯಾ ಅವರು ಪತಿ ಜೊತೆ ವಾಸವಿದ್ದರು. ಪತಿ, ಸಲೂನ್ ಮಳಿಗೆ ನಡೆಸುತ್ತಿದ್ದರು. ಗುರುವಾರ ಪತಿ ಮಳಿಗೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ದಿವ್ಯಾ ಒಬ್ಬರೇ ಮನೆಯಲ್ಲಿದ್ದರು’ ಎಂದು ತಿಳಿಸಿದರು.

ADVERTISEMENT

ಚಿನ್ನದ ಸರ ದೋಚಲು ಕೃತ್ಯ: ‘ದಿವ್ಯಾ ಅವರು ಚಿನ್ನದ ಸರ ಧರಿಸಿದ್ದರು. ಅದನ್ನು ನೋಡಿದ್ದ ಆರೋಪಿಗಳು, ಮನೆ ಬಳಿ ಹಲವು ಸುತ್ತಾಡಿದ್ದರೆಂದು ಗೊತ್ತಾಗಿದೆ. ಮನೆಯಲ್ಲಿ ಯಾರೂ ಇಲ್ಲವೆಂಬುದು ಗೊತ್ತಾಗುತ್ತಿದ್ದಂತೆ ಆರೋಪಿಗಳು, ಒಳಗೆ ನುಗ್ಗಿ ಚಿನ್ನದ ಸರ ಕಿತ್ತುಕೊಳ್ಳಲು ಮುಂದಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದಿವ್ಯಾ ಅವರು ಪ್ರತಿರೋಧವೊಡ್ಡಿದ್ದರು. ಆರೋಪಿಗಳು, ಕುತ್ತಿಗೆ ಹಿಸುಕಿ ದಿವ್ಯಾ ಅವರನ್ನು ಕೊಂದು ಪರಾರಿಯಾಗಿದ್ದಾರೆ. ಜೊತೆಗೆ, ಚಿನ್ನದ ಸರವನ್ನೂ ಕಿತ್ತೊಯ್ದಿದ್ದಾರೆ’ ಎಂದು ತಿಳಿಸಿವೆ.

‘ಚಿನ್ನದ ಸರಕ್ಕಾಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ, ಬೇರೆ ಕಾರಣವೂ ಇರುವ ಸಂಶಯವಿದೆ. ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.