ಬೆಂಗಳೂರು: ‘ಉರ್ದು ಕವಿ ಗುಲ್ಙಾರ್ಗೆ ಈ ಬಾರಿಯ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ. ಅದಕ್ಕೂ ಮುನ್ನ ಖಲೀಲ್ ಮಾಮೂನ್ ಅವರನ್ನು ಗುರುತಿಸಿ ಜ್ಞಾನಪೀಠ ಪ್ರಶಸ್ತಿ ನೀಡಬೇಕಿತ್ತು. ಉರ್ದು ಸಾಹಿತ್ಯಕ್ಕೆ ಅಷ್ಟೊಂದು ದೊಡ್ಡ ಕೊಡುಗೆ ನೀಡಿದವರು ಅವರು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್ ತಿಳಿಸಿದರು.
ರಾಜ್ಯ ಉರ್ದು ಅಕಾಡೆಮಿ ಸೋಮವಾರ ಆಯೋಜಿಸಿದ್ದ ಉರ್ದು ಕವಿ, ಬರಹಗಾರ ಹಾಗೂ ಅನುವಾದಕ ‘ಖಲೀಲ್ ಮಾಮೂನ್ರವರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಖಲೀಲ್ ಮಾಮೂನ್ ಕರ್ನಾಟಕಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ತಮ್ಮ ಸಾಹಿತ್ಯದ ಮೂಲಕ ವಿಶ್ವದಾದ್ಯಂತ ಉರ್ದು ಭಾಷಿಕರಲ್ಲಿ ಚಿರಪರಿಚಿತರಾಗಿದ್ದರು. ಯಾವತ್ತೂ ಪ್ರಚಾರದ ಹಂಗಿಗೆ ಬೀಳದೇ, ಪ್ರಶಸ್ತಿ, ಸನ್ಮಾನಗಳಿಗೆ ಹಾತೊರೆಯದೇ ಬರೆದವರು. ಅವರಂತೆ ಅರ್ಥಗರ್ಭಿತ, ಮೌಲ್ಯಯುತ ಕವಿತೆಗಳನ್ನು ಬರೆಯಲು ಈಗಿನವರಿಗೆ ಕಷ್ಟ. ಅವರ ಎಂಟು ಕೃತಿಗಳನ್ನು ಉರ್ದು ಅಕಾಡೆಮಿ ಒಟ್ಟುಗೂಡಿಸಿ ಸಮಗ್ರ ಸಾಹಿತ್ಯ ಸಂಪುಟ ಹೊರತರಬೇಕು’ ಎಂದು ಸಲಹೆ ನೀಡಿದರು.
ಖಲೀಲ್ ಮಾಮೂನ್ ಅವರ ಜೀವನ, ಸಾಧನೆ, ಸಾಹಿತ್ಯದ ಕುರಿತು ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ಆಜಂ ಶಾಹೀದ್ ಬೆಳಕು ಚೆಲ್ಲಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹ್ಮದ್, ಸಾಹಿತಿ ಎಚ್.ಎಸ್.ಶಿವಪ್ರಕಾಶ್, ರಾಜ್ಯ ಉರ್ದು ಅಕಾಡೆಮಿಯ ಅಧ್ಯಕ್ಷ ಮೌಲಾನ ಮುಹಮ್ಮದ್ ಅಲಿ ಖಾಝಿ, ಸದಸ್ಯರಾದ ಶಾಹಿದ್ ಖಾಝಿ, ಅನೀಸ್ ಸಿದ್ದೀಖಿ, ಝಫರ್ ಮೊಹಿಯುದ್ದೀನ್, ದಾವೂದ್ ಮೊಹ್ಸಿನ್, ಅಮೀನ್ ನವಾಝ್, ಆಬಿದ್ ಅಸ್ಲಮ್, ಶಾಯಿಸ್ತಾ ಯೂಸುಫ್, ಮಿಲನ್ಸಾರ್ ಅಥರ್ ಅಹ್ಮದ್, ಮಾಹೆರ್ ಮನ್ಸೂರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.