ಬೆಂಗಳೂರು: ‘ಒಳ ಮೀಸಲಾತಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಜಿ. ಪರಮೇಶ್ವರ, ಎಚ್.ಸಿ. ಮಹದೇವಪ್ಪ ಸೇರಿದಂತೆ ಬಲಗೈ ಸಮುದಾಯದ ಹಲವು ನಾಯಕರು ಅಸಹನೆ ತೋರುತ್ತಿದ್ದಾರೆ’ ಎಂದು ಮಾದಿಗ ಮಹಾಸಭಾ ಅಧ್ಯಕ್ಷ ಹನುಮಂತಪ್ಪ ದುರ್ಗ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಲಿತ ಮುಖ್ಯಮಂತ್ರಿ ವಿಚಾರ ಬಂದಾಗ ಇದೇ ನಾಯಕರು ಜೊತೆ ಸೇರುತ್ತಿದ್ದಾರೆ. ಮಾದಿಗ ಸಮುದಾಯವನ್ನು ಕಡೆಗಣಿಸಿ ಬಹುಪಾಲು ಸೌಲಭ್ಯಗಳನ್ನು ಇದೇ ಸಮುದಾಯ ಪಡೆಯುತ್ತಿದೆ. ಒಳ ಮೀಸಲಾತಿ ಜಾರಿಗೆ ಬಾರದೇ ದಲಿತ ಮುಖ್ಯಮಂತ್ರಿ ಪದವಿ ದಲಿತರಿಗೆ ಬೇಕಾಗಿಲ್ಲ’ ಎಂದರು.
‘ಒಳ ಮೀಸಲಾತಿ ಜಾರಿ ಮಾಡುವುದಾಗಿ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ಆನಂತರ ಬದ್ಧತೆ ತೋರುತ್ತಿಲ್ಲ. ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು. ಅಲ್ಲಿಯವರೆಗೆ ಸರ್ಕಾರ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.
ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಟಿ., ಶೋಷಿತ ಸಮಾಜದ ಅಧ್ಯಕ್ಷ ಬಿ. ರಾಜಪ್ಪ, ವಕೀಲರಾದ ಡಿ. ತಿಪ್ಪೇಸ್ವಾಮಿ, ಎಸ್.ದಯಾನಂದ, ಎಸ್.ಕೆ. ಸುರೇಶ್, ಎಲ್. ಸುರೇಶ್, ಮಾದಿಗ ದಂಡೋರ ಜಿಲ್ಲಾ ಘಟಕದ ಅಧ್ಯಕ್ಷ ಮೂರ್ತಿ ಸಿ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.