ಬೆಂಗಳೂರು: ಮಗು ಅಪಹರಿಸಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಜಾರ್ಖಂಡ್ನ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ನ ಜಸ್ಮುದ್ದೀನ್ ಶೇಖ್ (25) ಬಂಧಿತ ಆರೋಪಿ.
‘ಜೂನ್ 17ರಂದು ಸಂಜೆ 6 ಗಂಟೆ ಸುಮಾರಿಗೆ ಪ್ರಗತಿನಗರದ ಚಿಕ್ಕತೇಗೂರು ಮುಖ್ಯರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವನ್ನು ಅಪಹರಣ ಮಾಡಿದ್ದ. ಮಗುವನ್ನು ಬೊಮ್ಮನಹಳ್ಳಿ ಸೇರಿ ವಿವಿಧೆಡೆ ಆಟೊದಲ್ಲಿ ಕರೆದೊಯ್ದು ಸುತ್ತಾಡಿಸಿದ್ದ. ನಂತರ, ವಾಟ್ಸ್ಆ್ಯಪ್ ಕರೆ ಮಾಡಿ ಪೋಷಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ತಕ್ಷಣವೇ ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕರೆ ಆಧರಿಸಿ ತಂತ್ರಜ್ಞಾನದ ನೆರವಿನಿಂದ ಜೂನ್ 18ರ ಮಧ್ಯರಾತ್ರಿ ಅಸ್ಟೋರಿಯಾ ಪಾರ್ಕ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು’ ಎಂದು ಪೊಲೀಸರು ಹೇಳಿದರು.
ಆರೋಪಿ ಹೋಟೆಲ್ ನಡೆಸುತ್ತಿದ್ದ. ಹೋಟೆಲ್ ಉದ್ಯಮದಲ್ಲಿ ನಷ್ಟಕ್ಕೆ ಒಳಗಾದ ಆರೋಪಿ ಮಕ್ಕಳನ್ನು ಅಪಹರಿಸಿ ಪೋಷಕರನ್ನು ಬೆದರಿಸಿ ಹಣ ಸುಲಿಗೆ ಮಾಡಲು ಸಂಚು ರೂಪಿಸಿದ್ದ. ಇದಕ್ಕೂ ಮೊದಲು ಇಬ್ಬರು ಮಕ್ಕಳಿಗೆ ಕೇಕ್ ಕೊಡಿಸುವ ನೆಪದಲ್ಲಿ ಅಪಹರಣ ಮಾಡಲು ಮುಂದಾಗಿದ್ದ. ಅದು ಸಾಧ್ಯವಾಗಿರಲಿಲ್ಲ’ ಎಂದು ಪೊಲೀಸರು ಹೇಳಿದರು.
‘ರಕ್ಷಣೆ ಮಾಡಿದ ಮಗವನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.