ಬೆಂಗಳೂರು: ‘ನನ್ನಂತಹ ಅನೇಕರಿಗೆ ಜಗತ್ತಿನ ಶ್ರೇಷ್ಠ ಕೃತಿಗಳನ್ನು ಓದಲು ಪ್ರೋತ್ಸಾಹಿಸಿದವರು ಕಿ.ರಂ.ನಾಗರಾಜ ಮತ್ತು ಪಿ.ಲಂಕೇಶ್ ಅವರು. ಮಾತ್ರವಲ್ಲ, ನಾವು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ತಪ್ಪು ಮಾಡಿದಾಗ ಅದನ್ನು ಗಮನಿಸಿ ತಿದ್ದುತ್ತಿದ್ದರು’ ಎಂದು ಸಂಸ್ಕೃತಿ ಚಿಂತಕ ಶೂದ್ರ ಶ್ರೀನಿವಾಸ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಸಂಸ ಥಿಯೇಟರ್ ಮತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆ.ಎನ್.ವಿಜಯಲಕ್ಷ್ಮಿ ಅನುವಾದ ಕಾವ್ಯ ಕಮ್ಮಟ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ’ ಅವರು ಮಾತನಾಡಿದರು.
‘ನಮಗೆ ಕಿ.ರಂ. ಮತ್ತು ಲಂಕೇಶ್ ಎರಡು ವಿಶ್ವವಿದ್ಯಾಲಯಗಳಿದ್ದಂತೆ. ವಾರದಲ್ಲಿ ನಾಲ್ಕು ದಿನಗಳಾದರೂ ಇವರ ಮನೆಗಳಲ್ಲಿ ಹಲವು ವಿಷಯಗಳ ಕುರಿತು ಚರ್ಚೆ, ಸಂವಾದಗಳು ನಡೆಯುತ್ತಿದ್ದವು’ ಎಂದು ಸ್ಮರಿಸಿದರು.
‘ಕಿ.ರಂ. ಅವರ ಪತ್ನಿ ಕೆ.ಎನ್.ವಿಜಯಲಕ್ಷ್ಮಿ ಅವರು ಸ್ವಲ್ಪ ತಡವಾಗಿ ಅನುವಾದ ಕ್ಷೇತ್ರವನ್ನು ಪ್ರವೇಶಿಸಿದರು. ನಂತರದಲ್ಲಿ ಹಲವು ನಾಟಕಗಳು, ಕವಿತೆಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಮಲರ್ವಿಳಿ ಕೆ. ಅವರಿಗೆ ‘2024ನೇ ಸಾಲಿನ ಕೆ.ಎನ್.ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಕಿ.ರಂ. ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರಿಯರಾದ ಕೆ.ಎನ್. ಸಹನ, ಕೆ.ಎನ್. ಚಂದನ, ಕೆ.ಎನ್. ಕವನ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.