ಬೆಂಗಳೂರು: ಬೆಂಗಳೂರು ನಗರ ಪೊಲೀಸರ ಸಹಕಾರದಲ್ಲಿ ಕೃಪಾನಿಧಿ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ನಗರದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿದರು.
ನಗರದಲ್ಲಿ ನಡೆದ ಡ್ರಗ್ಸ್ ಮುಕ್ತ ಸಮಾಜ ಕಾರ್ಯಕ್ರಮದಲ್ಲಿ ಜಾಗೃತಿ ನಡಿಗೆ ನಡೆಸಿ, ಡ್ರಗ್ಸ್ನ ಅಪಾಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ರಂಗೋಲಿ, ಚಿತ್ರಕಲೆ ಸೇರಿ ವಿವಿಧ ಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಮಾದಕವಸ್ತು ಸೇವನೆಯ ವ್ಯಸನದ ಅಪಾಯದ ಕುರಿತಾದ ಕಲಾಕೃತಿಗಳ ಪ್ರದರ್ಶನವೂ ನಡೆಯಿತು.
‘ಮಾದಕ ವಸ್ತುಗಳ ಬಳಕೆಯ ವಿರುದ್ಧದ ಹೋರಾಟದಲ್ಲಿ ಸಮುದಾಯದ ಪಾತ್ರ’ದ ಬಗ್ಗೆ ವೈಟ್ಫೀಲ್ಡ್ ಉಪ ವಿಭಾಗದ ಎಸಿಪಿಗಳಾದ ಶಿವಕುಮಾರ್ ಹಾಗೂ ಪ್ರಿಯದರ್ಶಿನಿ ಈಶ್ವರ್ ಸಾನಿಕೋಪ್ ವಿವರಿಸಿದರು.
ಡ್ರಗ್ಸ್ ಬಳಕೆಯ ಅಪಾಯದ ಬಗ್ಗೆ ಕೃಪಾನಿಧಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮತ್ತು ಕಿರುನಾಟಕಗಳ ಪ್ರದರ್ಶನ ನೀಡಿದರು. ಈ ಕಾರ್ಯಕ್ರಮದ ಭಾಗವಾಗಿ ಬೆಂಗಳೂರು ನಗರ ಪೊಲೀಸ್ (ಮಾರತಹಳ್ಳಿ ಉಪವಿಭಾಗ) ಮತ್ತು ಕೃಪಾನಿಧಿ ವಿದ್ಯಾ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಬಳಿಕ ಮಾರತಹಳ್ಳಿ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಮಧ್ಯೆ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.
ವರ್ತೂರು ಪೊಲೀಸ್ ಠಾಣೆ ತಂಡ ಅಗ್ರಸ್ಥಾನ ಪಡೆದರೆ, ಎಚ್ಎಎಲ್ ಪೊಲೀಸ್ ಠಾಣೆ ರನ್ನರ್ ಅಪ್ ಆಗಿ ಹೊರಹೊಮ್ಮಿತು. ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಬಹುಮಾನ ವಿತರಿಸಿದರು. ಕೃಪಾನಿಧಿ ಸಮೂಹ ಸಂಸ್ಥೆಗಳ ನಿರ್ದೇಶಕ ಸ್ಯಾಮ್ ಪಾಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.