ಬೆಂಗಳೂರು: ‘ಭಾಷೆ ಕೇವಲ ಒಂದು ವಿಷಯವಾಗದೆ, ಮನುಷ್ಯನಿಗೆ ಬೇಕಾದ ಮೌಲ್ಯಗಳನ್ನು, ಬದುಕನ್ನು, ಕಲೆಗಳನ್ನು ಕಲಿಸುತ್ತವೆ‘ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಂಘ ಮತ್ತು ರಂಗ ಚಾರಕ ಫೌಂಡೇಷನ್ ಸಹಯೋಗದಲ್ಲಿ ಶುಕ್ರವಾರ ನಡೆದ ‘ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ನಾಡಹಬ್ಬ’ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಮೇಲೆ ಹೆಚ್ಚು ಪ್ರಭಾವ ಬೀರುವುದು ಭಾಷೆ. ಇಂಥ ಭಾಷಿಕ ವಿಷಯವನ್ನೇ ಕಡಿತಗೊಳಿಸುವುದೆಂದರೆ ನಮ್ಮ ಸಂಸ್ಕೃತಿಯನ್ನು ಕಡಿತಗೊಳಿಸಿದಂತೆ’ ಎಂದು ಅವರು ಹೇಳಿದರು.
ಸರ್ಕಾರಿ ಕಲಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಬಂಜಾರ ಅಕಾಡೆಮಿಯ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಪಿ.ಟಿ. ಶ್ರೀನಿವಾಸ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಂಘದ ಸಂಚಾಲಕ ರುದ್ರೇಶ್ ಅದರಂಗಿ ಸ್ವಾಗತಿಸಿದರು, ಇತಿಹಾಸ ಅಧ್ಯಾಪಕ ಕೆ.ಜಿ.ನಾರಾಯಣ ಅವರು ಕರ್ನಾಟಕ ಏಕೀಕರಣ ಮತ್ತು ನಾಮಕರಣ ವಿಷಯ ಕುರಿತು ಮಾತನಾಡಿದರು.
ರಂಗ ಚಾರಕ ಫೌಂಡೇಶನ್ ಅಧ್ಯಕ್ಷ ಹಿದಾಯತ್ ಅಹಮದ್ ನೇತೃತ್ವದಲ್ಲಿ ವಿವಿಧ ಕಲೆಗಳ ತರಬೇತಿ ಪಡೆದ ವಿದ್ಯಾರ್ಥಿಗಳು ಪ್ರಾದೇಶಿಕ ಭಾಗಗಳ ಪ್ರಾತಿನಿಧಿಕ ಕಲೆ ಪ್ರದರ್ಶಿಸಿದರು. ಪ್ರಕೃತಿ ಮತ್ತು ತಂಡ, ಅಮಿತ್ ತಂಡದ ಡೊಳ್ಳು ಕುಣಿತ, ಬಸವರಾಜ್ ಮತ್ತು ತಂಡದ ಕಂಸಾಳೆ, ಹರಿಣಿ ಮತ್ತು ತಂಡದ ಹಾಲಕ್ಕಿ ಕುಣಿತ, ಗಗನ ಮತ್ತು ತಂಡದ ಕೋಲಾಟ, ವರ್ಷ ಮತ್ತು ತಂಡದ ಯಕ್ಷಗಾನ, ನರೇಶ್ ಮತ್ತು ತಂಡದವರು ಜನಪದ ಗಾಯನ, ಛಾಯಾ ಮತ್ತು ತಂಡದ ಬಂಜಾರ ನೃತ್ಯ , ಚಂದನ್ ಮತ್ತು ತಂಡದ ಕಂಗೀಲು ನೃತ್ಯ ಆಕರ್ಷಕವಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.