ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಸೋಮವಾರ ತಡರಾತ್ರಿ ಭಾರಿ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಗುಡುಗು, ಮಿಂಚು, ಬಿರುಗಾಳಿಯೊಂದಿಗೆ ಮುಂಜಾನೆವರೆಗೆ ಭಾರಿ ಮಳೆ ಸುರಿಯಿತು. ಬಿಬಿಎಂಪಿ ವ್ಯಾಪ್ತಿಯ ದೊಡ್ಡನೆಕುಂದಿ, ಎಚ್ಎಎಲ್ ಸುತ್ತಮುತ್ತಲ ಪ್ರದೇಶಗಳಲ್ಲಿ 6 ರಿಂದ 8 ಸೆಂಟಿ ಮೀಟರ್ನಷ್ಟು ಮಳೆಯಾಗಿದೆ.
ಮೈಸೂರು ರಸ್ತೆ ಗುಡ್ಡದಹಳ್ಳಿಯಲ್ಲಿ ಮನೆಗಳ ಒಳಗೆ ಒಳಚರಂಡಿ ನೀರು ಮತ್ತು ಮಳೆ ನೀರು ನುಗ್ಗಿತು. ನಿವಾಸಿಗಳು ಮನೆಯೊಳಗಿನ ನೀರನ್ನು ಹೊರ ಹಾಕಲು ಬೆಳಿಗ್ಗೆವರೆಗೆ ಶ್ರಮವಹಿಸಿದರು.
‘ಒಳಚರಂಡಿ ಮಾರ್ಗದಲ್ಲಿ ಸಾಕಷ್ಟು ಸಮಸ್ಯೆ ಇದೆ. ಮಳೆ ಬಂದ ಕೂಡಲೇ ತುಂಬಿಕೊಂಡು ಹೊರ ಹರಿಯುತ್ತದೆ. ಮಳೆ ನೀರಿನೊಂದಿಗೆ ಕೊಳಕು ನೀರು ಮನೆಯೊಳಗೆ ನುಗ್ಗುತ್ತದೆ. ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಲ್ಲಿನ ನಿವಾಸಿಗಳು ದೂರಿದರು.
ಜೆ.ಪಿ. ನಗರ, ಅಗರ ರಸ್ತೆಗಳಲ್ಲಿ ಮರಗಳು ಉರುಳಿ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಧಾರಾಕಾರವಾಗಿ ಮಳೆ ಸುರಿದಿದ್ದರಿಂದ, ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಹೊಸಕೆರೆಹಳ್ಳಿ, ಮೈಸೂರು ರಸ್ತೆ, ಪೀಣ್ಯ ಮುಖ್ಯರಸ್ತೆ, ನಾಯಂಡಹಳ್ಳಿ, ಶಿವಾಜಿನಗರ, ಎಂ.ಜಿ. ರಸ್ತೆ, ಜೆ.ಸಿ. ನಗರ ಸಹಿತ ಅನೇಕ ಕಡೆಗಳಲ್ಲಿ ರಸ್ತೆಯಲ್ಲಿ ನೀರು ಹರಿದು ತೊಂದರೆ ಉಂಟಾಯಿತು.
ಮಂಗಳವಾರ ರಾತ್ರಿ ಸುರಿದ ಮಳೆ (ಸೆಂ.ಮೀ)
ದೊಡ್ಡನೆಕ್ಕುಂದಿ;7.9
ಎಚ್ಎಎಲ್ ವಿಮಾನ ನಿಲ್ದಾಣ;6.3
ಕೋನೇನ ಅಗ್ರಹಾರ;4.4
ವಿಜ್ಞಾನ ನಗರ;3.8
ಎಚ್ಎಸ್ಆರ್ ಬಡಾವಣೆ;3.8
ಮಾರತ್ಹಳ್ಳಿ;3.7
ಸಿಂಗಸಂದ್ರ;3.4
ಹಂಪಿನಗರ;3.4
ಗಾಳಿ ಆಂಜನೇಯ ದೇವಸ್ಥಾನ;3.4
ವಿದ್ಯಾಪೀಠ;3.3
ವನ್ನಾರ್ಪೇಟೆ;3.3
ಬಸವನಗುಡಿ;3.3
ಕುಮಾರಸ್ವಾಮಿ ಲೇಔಟ್;3.3
ರಾಜಮಹಲ್ ಗುಟ್ಟಳ್ಳಿ;3.2
ಹೊರಮಾವು;3.2
ಮಾರುತಿ ಮಂದಿರ;3
ನಾಗರಬಾವಿ;3
ಸಂಪಿಗೆ ನಗರ;3
ಮಳೆಯೊಂದಿಗೆ ಗುಂಡಿಯೂ ಹೆಚ್ಚಳ ನಗರದಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಮಳೆ ಪ್ರಮಾಣ ಏರುತ್ತಿದ್ದಂತೆ ನಗರದ ರಸ್ತೆಗಳಲ್ಲಿ ಬೀಳುತ್ತಿರುವ ಗುಂಡಿ–ಹೊಂಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಲವು ಕಡೆಗಳಲ್ಲಿ ರಸ್ತೆ ಮಧ್ಯೆಯೇ ಗುಂಡಿಗಳು ಬಾವಿ, ಕೆರೆಗಳಂತಾಗಿದ್ದು, ಒಂದೆಡೆ ವಾಹನ ಸಂಚಾರಕ್ಕೆ ತೊಡಕಾಗಿದ್ದರೆ, ಇನ್ನೊಂದೆಡೆ ವಾಹನಗಳು ಸಾಗುವಾಗ ಪಾದಚಾರಿಗಳ ಮೇಲೆ ಕೆಸರು ನೀರಿನ ಸಿಂಚನವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.