ಬೆಂಗಳೂರು: ಉನ್ನತ ಶಿಕ್ಷಣ ಬೋಧನೆಗಷ್ಟೇ ಸೀಮಿತವಾಗಬಾರದು. ವಾಸ್ತವದ ಪ್ರಯೋಗಗಳಿಗೆ ತೆರೆದುಕೊಳ್ಳುವ ರೀತಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಉನ್ನತ ಶಿಕ್ಷಣದಲ್ಲಿ 21ನೇ ಶತಮಾನದ ಕೌಶಲಗಳು’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬದಲಾವಣೆಗೆ ತಕ್ಕಂತೆ ಉನ್ನತ ಶಿಕ್ಷಣ ಸಂಸ್ಥೆಗಳೂ ಸಜ್ಜುಗೊಳ್ಳಬೇಕು. ಕಲಿಕಾ ವಿಧಾನಗಳು ಬದಲಾಗಬೇಕು. ಅಧ್ಯಾಪಕರು ನಿರಂತರವಾಗಿ ಪುನಃಶ್ಚೇತನಗೊಳ್ಳಬೇಕು. ಜಗತ್ತಿನ ಶಿಕ್ಷಣ ವ್ಯವಸ್ಥೆ ಜತೆಗೆ ರಾಜ್ಯದ ವಿದ್ಯಾರ್ಥಿಗಳನ್ನೂ ಸಿದ್ಧಗೊಳಿಸಬೇಕು. ಅದಕ್ಕೆ ಅಗತ್ಯವಾದ ಕೌಶಲಗಳನ್ನು ಹೇಳಿಕೊಡಬೇಕು ಎಂದರು.
ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಎಸ್.ಬಿ. ಅಪ್ಪಾಜಿ ಗೌಡ, ಹೆಚ್ಚುವರಿ ನಿರ್ದೇಶಕಿ ಜಿ. ಶೋಭಾ, ಆಡಳಿತಾಧಿಕಾರಿ ಶೋಭಾ ಟಿ.ಆರ್, ಜಂಟಿ ನಿರ್ದೇಶಕ ಕೆ. ರಾಮಕೃಷ್ಣ ರೆಡ್ಡಿ, ಪ್ರಾಂಶುಪಾಲ ಪಿ.ಟಿ.ಶ್ರೀನಿವಾಸ ನಾಯಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.