ನೆಲಮಂಗಲ: ಹೃದಯವಂತಿಕೆಯ ಸಂಸ್ಕಾರವನ್ನು ತಂದೆ ತಾಯಿಗಳು ಆಚರಿಸಿದಾಗ ಮಕ್ಕಳು ಅನುಸರಿಸುತ್ತಾರೆ. ಆಗ ಮನೆಯೇ ಪಾಠಶಾಲೆಯಾಗುತ್ತದೆ ಎಂದು ಸಿದ್ದಾರ್ಥ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ. ಲಿಂಗೇಗೌಡ ತಿಳಿಸಿದರು.
ಕಂಬಯ್ಯನಪಾಳ್ಯದಲ್ಲಿರುವ ಹರ್ಷ ಬಯಲು ರಂಗಮಂದಿರಲ್ಲಿ ಹಮ್ಮಿಕೊಂಡಿದ್ದ ಹರ್ಷ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಕ್ಯಾನ್ಸರ್ ಬಗ್ಗೆ ಭಯ ಬೇಡ. ಅದು ಗುಣಪಡಿಸುವ ಕಾಯಿಲೆ. ಕಿದ್ವಾಯಿ ಆಸ್ಪತ್ರೆಯಲ್ಲಿ ನಿರ್ದೇಶಕನಾಗಿ, ವೈದ್ಯನಾಗಿ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ’ ಎಂದು ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸಿದರು.
ವಿದ್ಯಾರ್ಥಿಗಳು ವಿಷ್ಣುವಿನ ವಿಶ್ವರೂಪ, ಹೊಯ್ಸಳ ಸಾಮ್ರಾಜ್ಯ ಸ್ಥಾಪನೆ, ಮಹಿಷಮರ್ಧನ ರೂಪಕಗಳನ್ನು ಪ್ರದರ್ಶಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಸಂಸ್ಥೆಯ ಅಧ್ಯಕ್ಷ ಎಸ್. ಶಿವಕುಮಾರ್, ಉಪಾಧ್ಯಕ್ಷೆ ಗಿರಿಜಾ, ಕಾರ್ಯದರ್ಶಿ ಹರ್ಷ ಇದ್ದರು. ಸಹಕಾರ್ಯದರ್ಶಿ ಯಶಸ್ ಸಂಸ್ಥೆಯ ಮುಂದಿನ ಯೋಜನೆಗಳನ್ನು ವಿವರಿಸಿದರು. ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ಸತೀಶ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಬಿಂದುಶರ್ಮ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪೂರ್ಣಿಮಾ ವಾರ್ಷಿಕ ವರದಿ ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.