ADVERTISEMENT

ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ ಕುಮಾರ್‌ ಹೊಸಮನಿ ಅಮಾನತು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 1:18 IST
Last Updated 12 ಮಾರ್ಚ್ 2024, 1:18 IST
ಸತೀಶ್ ಕುಮಾರ್ ಎಸ್.ಹೊಸಮನಿ
ಸತೀಶ್ ಕುಮಾರ್ ಎಸ್.ಹೊಸಮನಿ   

ಬೆಂಗಳೂರು: ₹ 20 ಕೋಟಿ ಮೌಲ್ಯದ ಪುಸ್ತಕಗಳನ್ನು ಖರೀದಿಸಿ, ಗ್ರಂಥಾಲಯಗಳಿಗೆ ರವಾನಿಸದೇ ಇರುವುದು, ಮಂಜೂರಾತಿಗಿಂತ ಹೆಚ್ಚು ಮೊತ್ತದ ಪುಸ್ತಕ ಖರೀದಿ, ಟೆಂಡರ್‌ಗಳಲ್ಲಿ ಅಕ್ರಮ ಸೇರಿದಂತೆ ಹಲವು ಆರೋಪಗಳ ಮೇಲೆ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್‌ ಎಸ್. ಹೊಸಮನಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಸತೀಶ್‌ ಕುಮಾರ್‌ ವಿರುದ್ಧದ ಆರೋಪಗಳ ಕುರಿತು ತನಿಖೆಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿತ್ತು. ತನಿಖಾ ಸಮಿತಿ ನೀಡಿರುವ ವರದಿ ಆಧರಿಸಿ ಗ್ರಂಥಾಲಯ ಇಲಾಖೆ ನಿರ್ದೇಶಕರನ್ನು ಅಮಾನತುಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

‘₹ 6.5 ಕೋಟಿ ಮೌಲ್ಯದ ಪುಸ್ತಕಗಳ ಖರೀದಿಗೆ ಮಾತ್ರ ಅವಕಾಶವಿದ್ದರೂ, ₹ 20.57 ಕೋಟಿ ಮೌಲ್ಯದ ಪುಸ್ತಕ ಖರೀದಿಸಿ ಅಕ್ರಮ ಎಸಗಿದ್ದಾರೆ. ಡಿಜಿಟಲ್‌ ಗ್ರಂಥಾಲಯ ಯೋಜನೆ ಅನುಷ್ಠಾನ ಯಶಸ್ವಿಯಾಗಿರುವ ಕುರಿತು ಪ್ರಮಾಣಪತ್ರವನ್ನೇ ಪಡೆದಿಲ್ಲ. ಕೆಲವು ಟೆಂಡರ್‌ ಪ್ರಕ್ರಿಯೆಗಳಲ್ಲಿ ಆಯ್ದವರಿಗೆ ಗುತ್ತಿಗೆಗೆ ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ’ ಎಂದು ತನಿಖಾ ಸಮಿತಿ ವರದಿಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.