ಬೆಂಗಳೂರು: ನಿರ್ಮಾಪಕ ಪುಷ್ಕರ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಅಡಿ ನಾಲ್ವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಷ್ಕರ್ ಅವರು ನೀಡಿದ ದೂರು ಆಧರಿಸಿ ಸಹಕಾರ ಸಂಘಗಳ ಉಪ ನಿಬಂಧಕ ಕಿಶೋರ್ ಕುಮಾರ್ ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಿ.ಬಿ.ಆದರ್ಶ, ಸಿ.ಹರ್ಷ, ಶಿವು, ಡಿ.ಬಿ.ಹರ್ಷ ವಿರುದ್ಧ ಕರ್ನಾಟಕ ಲೇವಾದೇವಿದಾರರ ಕಾಯ್ದೆ ಮತ್ತು ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯ್ದೆಯ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಕೆಲವು ವರ್ಷಗಳಿಂದ ಆರ್ಥಿಕ ನಷ್ಟದಲ್ಲಿದ್ದೇನೆ. ನಷ್ಟದಿಂದ ಪಾರಾಗಲು ಕೆಲವರ ಬಳಿ ಸಾಲಕ್ಕೆ ಹಣ ಕೇಳಿದ್ದೆ. ಅವರು ಸಾಲ ನೀಡಿದ್ದರು. ಬಡ್ಡಿ ನೀಡುವಂತೆ ಸೂಚಿಸಿದ್ದರು. ಸಾಲಕ್ಕೆ ಭದ್ರತೆಯಾಗಿ 10 ಖಾಲಿ ಚೆಕ್ಗಳನ್ನು ನೀಡಿದ್ದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಸಾಲಕ್ಕೆ ಪ್ರತಿ ತಿಂಗಳು ಬಡ್ಡಿ ಪಾವತಿಸಿದ್ದೇನೆ. ನೀವು ನೀಡಿದ್ದ ಹಣ ಬಡ್ಡಿ ಮತ್ತು ಚಕ್ರ ಬಡ್ಡಿಗೆ ಸರಿಯಾಗಿದೆ. ಹೀಗಾಗಿ ಇನ್ನೂ ನಮಗೆ ₹ 13 ಕೋಟಿ ನೀಡಬೇಕು ಎಂದು ಬೇಡಿಕೆ ಇರಿಸುತ್ತಿದ್ದಾರೆ. ಮನೆ ಮತ್ತು ಕಚೇರಿಗೆ ಕೆಲವರು ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.