ADVERTISEMENT

ಓಮ್ವೆಡ್ತ್‌ ಭಾರತ ಕಂಡ ದೊಡ್ಡ ಸಮಾಜಶಾಸ್ತ್ರಜ್ಞ: ಸಿ.ಜಿ. ಲಕ್ಷ್ಮೀಪತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 16:33 IST
Last Updated 6 ಜನವರಿ 2024, 16:33 IST
ಬೇಗಂಪುರ ಪುಸ್ತಕದ ಸಂವಾದ ಕಾರ್ಯಕ್ರಮದಲ್ಲಿ ಹೊನ್ನುಸಿದ್ಧಾರ್ಥ, ಬಂಜಗೆರೆ ಜಯಪ್ರಕಾಶ್‌, ಸಿ.ಜಿ. ಲಕ್ಷ್ಮಿಪತಿ ಭಾಗವಹಿಸಿದ್ದರು.
ಬೇಗಂಪುರ ಪುಸ್ತಕದ ಸಂವಾದ ಕಾರ್ಯಕ್ರಮದಲ್ಲಿ ಹೊನ್ನುಸಿದ್ಧಾರ್ಥ, ಬಂಜಗೆರೆ ಜಯಪ್ರಕಾಶ್‌, ಸಿ.ಜಿ. ಲಕ್ಷ್ಮಿಪತಿ ಭಾಗವಹಿಸಿದ್ದರು.   

ಬೆಂಗಳೂರು: ‘ಗೇಲ್ ಓಮ್ವೆಡ್ತ್‌ ಭಾರತ ಕಂಡ ದೊಡ್ಡ ಸಮಾಜಶಾಸ್ತ್ರಜ್ಞ. ಆದರೆ, ಯಾವ ಸಮಾಜಶಾಸ್ತ್ರಜ್ಞರೂ ಅವರ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಹಾಗೆಯೇ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸಹ ಸಮಾಜಶಾಸ್ತ್ರಜ್ಞರು ಎಂದು ಯಾರೂ ಕೂಡ ಪರಿಗಣಿಸಿಲ್ಲ’ ಎಂದು ಸಮಾಜಶಾಸ್ತ್ರಜ್ಞ ಸಿ.ಜಿ. ಲಕ್ಷ್ಮೀಪತಿ ಹೇಳಿದರು.

ನಗರದಲ್ಲಿ ಶನಿವಾರ ಬಯಲು ಬಳಗ ಆಯೋಜಿಸಿದ್ದ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಅನುವಾದಿಸಿರುವ ‘ಬೇಗಂಪುರ’ ಪುಸ್ತಕದ ಸಂವಾದ ಮತ್ತು ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಳಸಮುದಾಯಗಳ ಚಿಂತಕರನ್ನು ಒಳಗೊಳ್ಳದ ರಾಜಕಾರಣವಾಗಿ ಇಂದಿಗೂ ಪ್ರಜ್ಞಾವಂತ ಭಾರತದಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಬಂಜಗೆರೆ ಜಯಪ್ರಕಾಶ್, ‘ಅಂಬೇಡ್ಕರ್ ಅವರು ಸ್ವತಃ ವಾರ್ಕರಿ ಚಳವಳಿಯ ಸಂತರನ್ನು ಜಾತಿವಿರೋಧಿ ಸಂತರೆಂದು ನೋಡಲು ಸಾಧ್ಯವಾಗಿರಲಿಲ್ಲ. ಅದೇ ರೀತಿ ಕಬೀರರನ್ನೂ ಕೂಡ. ಆದರೆ ರವಿದಾಸರನ್ನು ಮಾತ್ರ ಜಾತಿವಿರೋಧಿ ಪ್ರವರ್ತಕರಾಗಿ ಒಪ್ಪಿದ್ದರು. ಕಾರಣ ಆ ಕಾಲಕ್ಕೆ ಅಂಬೇಡ್ಕರ್ ಅವರಿಗೆ ತಿಳಿದಿದ್ದಂತೆ ವಾರ್ಕರಿ ಚಳವಳಿ ಬ್ರಾಹ್ಮಣೀಕರಿಸಲ್ಪಟ್ಟಿತ್ತು. ಭಾರತದ ಬಹುತೇಕ ಸಂತರು ಭಾರತದ ಇತಿಹಾಸವನ್ನು ಪ್ರವೇಶ ಮಾಡಿರಲಿಲ್ಲ. ಆದರೆ ಜ್ಯೋತಿ ಬಾ ಫುಲೆ ಅವರನ್ನು ಒಳಗೊಂಡಂತೆ ನಂತರ ಬಂದವರು ಭಾರತದ ಚರಿತ್ರೆಯನ್ನು ವಿಶಿಷ್ಟವಾಗಿ ಗ್ರಹಿಸಲೆತ್ನಿಸಿದರು. ಹೀಗಾಗಿ 14ನೇ ಶತಮಾನದಿಂದ ಹಿಡಿದು ಅಂಬೇಡ್ಕರ್ ವರೆಗಿನ ಪ್ರತಿಯೊಬ್ಬ ಸುಧಾರಕರ ಕನಸುಗಳನ್ನು ಗೇಲ್ ಓಮ್ವೆಡ್ತ್ ಅವರು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ’ ಎಂದರು. 

ಬೆಂಗಳೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಹೊನ್ನು ಸಿದ್ಧಾರ್ಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.