ADVERTISEMENT

ಲೋಕಸಭೆ ಚುನಾವಣೆ | ಪರಿಸರ ಪ್ರಣಾಳಿಕೆ ಬಿಡುಗಡೆ ಏಪ್ರಿಲ್‌ 6ರಂದು

ಪರಿಸರ ಕಾರ್ಯಕರ್ತರ ರಾಜ್ಯಮಟ್ಟದ ಮೊದಲ ಸಮಾವೇಶ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 16:15 IST
Last Updated 4 ಏಪ್ರಿಲ್ 2024, 16:15 IST
   

ಬೆಂಗಳೂರು: ‘ಪರಿಸರಕ್ಕಾಗಿ ನಾವು‘ ಸಂಘಟನೆ ವತಿಯಿಂದ ಇದೇ 6ರಂದು ‘ಪರಿಸರ ಪ್ರಣಾಳಿಕೆಗಾಗಿ ಬೆಂಗಳೂರು ಸಮಾವೇಶ’ವನ್ನು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ಕಾರ್ಯಕರ್ತ ನಾಗೇಶ ಹೆಗಡೆ ಮಾಹಿತಿ ನೀಡಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಆಕರ್ಷಕ ಭರವಸೆಗಳನ್ನು ಹೊಂದಿರುವ ಪ್ರಣಾಳಿಕೆಗಳನ್ನು ಸಿದ್ಧಪಡಿಸುತ್ತಿವೆ. ಆದರೆ, ಈ ಬಾರಿ ಪರಿಸ್ಥಿತಿ ಎಂದಿನಂತಿಲ್ಲ. ನಾವೆಲ್ಲ ಒಂದು ಮಹಾ ಪರಿಸರ ಬಿಕ್ಕಟ್ಟಿನ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇವೆ. ಆದ್ದರಿಂದ, ಎಲ್ಲ ಪಕ್ಷಗಳು ಪರಿಸರ ಸಂರಕ್ಷಣೆಯ ವಿಚಾರಗಳನ್ನು ತಮ್ಮ ಪ್ರಣಾಳಿಕೆಗಳಲ್ಲಿ ಸೇರಿಸಬೇಕು’ ಎಂದು ಒತ್ತಾಯಿಸಿದರು.

‘ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಇಲ್ಲದಿದ್ದರೆ ಮತ್ತೆಂದೂ ಸರಿಪಡಿಸಲು ಸಾಧ್ಯವಾಗದಂತಹ ಪರಿಸರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಅತಿವೃಷ್ಟಿ, ಅನಾವೃಷ್ಟಿ, ನೀರಿನ ಅಭಾವ, ಬಿಸಿ ಗಾಳಿ, ಪ್ರವಾಹ, ಬರಗಾಲ, ಹಿಮಗಡ್ಡೆ ಕರಗುವಿಕೆ ಇತ್ಯಾದಿ ಸಮಸ್ಯೆಗಳಿಗೆ ನಾವು ಸಿಲುಕಿದ್ದೇವೆ. ಹಾಗಾಗಿ, ಸದ್ಯ ನಮ್ಮ ದೇಶದ ಚುನಾವಣೆಯಲ್ಲಿ ಭಾಗವಹಿಸುವ ಎಲ್ಲ ಪಕ್ಷಗಳು, ಪಕ್ಷ ಬೇಧ ಮರೆತು ತಮ್ಮ ಪ್ರಣಾಳಿಕೆಗಳಲ್ಲಿ ಪರಿಸರ ತುರ್ತು ಎದುರಿಸುವ ವಿಚಾರಗಳನ್ನು ಆದ್ಯತೆಯ ಮೇರೆಗೆ ಸೇರಿಸಿಕೊಳ್ಳಬೇಕು’ ಎಂದರು.

ADVERTISEMENT

ಶೋಭಾ ಭಟ್‌, ಆಂಜನೇಯ ರೆಡ್ಡಿ ನೀರಾವರಿ, ಪಾರ್ವತಿ ಶ್ರೀರಾಮ್, ಪಾಪೇಗೌಡ, ವಿಶಾಲಾಕ್ಷಿ, ಪರಿಸರ ಮಂಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.