ಬೆಂಗಳೂರು: ಬಾಕಿ ಇರುವ ಜಿಎಸ್ಟಿಯ ಮೊತ್ತವನ್ನು ಕಡಿಮೆ ಮಾಡಲು ₹80,000 ಲಂಚ ಪಡೆಯುತ್ತಿದ್ದಾಗ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮಹದೇವಪುರದ ಮಹೇಶ್ವರಿನಗರದ ಉದ್ಯಮಿ ಪವನ್ ಕುಮಾರ್ ಎನ್. ಅವರು ತಮ್ಮ ಉದ್ಯಮದ ಜಿಎಸ್ಟಿ ಬಾಕಿ ಉಳಿಸಿಕೊಂಡಿದ್ದರು. ಕೋರಮಂಗಲ ವಿಭಾಗದ ವಾಣಿಜ್ಯ ತೆರಿಗೆ ಅಧಿಕಾರಿ ಶೇಖರ್ ಪಿ. ಪಾಟೀಲ ಅವರು ಜಿಎಸ್ಟಿ ಮೊತ್ತವನ್ನು ಕಡಿಮೆ ಮಾಡಿಕೊಡುವುದಾಗಿ ಹೇಳಿದ್ದರು. ಇದಕ್ಕಾಗಿ ₹80,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಪವನ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಮಾರ್ಗದರ್ಶನದಂತೆ ಸೋಮವಾರ ಶೇಖರ್ ಅವರಿಗೆ, ಅವರ ಕಚೇರಿಯಲ್ಲೇ ₹80,000 ನೀಡಿದ್ದರು. ಅದರಲ್ಲಿ ₹55,500 ಅನ್ನು ತನ್ನಲ್ಲಿಯೇ ಉಳಿಸಿಕೊಂಡು, ಉಳಿದ ₹29,500ನ್ನು ಆನ್ಲೈನ್ ಮೂಲಕ ಜಿಎಸ್ಟಿ ಪಾವತಿಸುವಂತೆ ದೂರುದಾರರಿಗೆ ವಾಪಸ್ ಮಾಡಿದ್ದರು.
ಇದೇ ವೇಳೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಲಂಚದ ಸಮೇತ ಆರೋಪಿಯನ್ನು ಬಂಧಿಸಿದರು. ಲೋಕಾಯುಕ್ತ ಎಸ್ಪಿ ಕೋನ ವಂಶಿಕೃಷ್ಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ತನಿಖೆ ಮುಂದುವರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.