ADVERTISEMENT

ಖಾಸಗಿ ತೆಕ್ಕೆಗೆ ಕೆರೆ ನಿರ್ವಹಣೆ: ನೀತಿ ರಚನೆ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಹೈಕೋರ್ಟ್ ಗೆ ರಾಜ್ಯ ಸರ್ಕಾರದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 19:19 IST
Last Updated 9 ಜುಲೈ 2024, 19:19 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 205 ಕೆರೆಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ನಿಟ್ಟಿನಲ್ಲಿ ನೀತಿಯೊಂದನ್ನು ರೂಪಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ, ಕೆರೆ ಜಾಗಗಳ ಒತ್ತುವರಿ ತೆರವುಗೊಳಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿ,‘ಸಿಟಿಜನ್‌  ಆ್ಯಕ್ಷನ್ ಗ್ರೂಪ್’ ಹಾಗೂ ಇತರರು 2014ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 205 ಕೆರೆಗಳಿವೆ. ಅವುಗಳ ನಿರ್ವಹಣೆಗೆ ಪಾಲಿಕೆಗೆ ವಾರ್ಷಿಕ ಅಂದಾಜು ₹30 ಕೋಟಿ ಬೇಕು. ಇಷ್ಟೊಂದು ದೊಡ್ಡ ಮೊತ್ತವನ್ನು ಪ್ರತಿ ವರ್ಷವೂ ಹೊಂದಿಸುವುದು ಕಷ್ಟವಾಗಲಿದೆ. ಆದ್ದರಿಂದ, ಕೆರೆಗಳ ನಿರ್ವಹಣೆಯನ್ನು ಸ್ಥಳೀಯ ನಿವಾಸಿಗಳ ಸಂಘಗಳು, ಸಹಕಾರ ಸಂಘಗಳು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು (ಎನ್ ಜಿಒ), ಕಾರ್ಪೋರೆಟ್ ಕಂಪನಿಗಳಿಗೆ ವಹಿಸುವ ಸಂಬಂಧ ನೀತಿ ರೂಪಿಸಲಾಗಿದೆ. ಕೆರೆಗಳ ಮಾಲೀಕತ್ವ, ಮೇಲ್ವಿಚಾರಣೆ ಸರ್ಕಾರ ಮತ್ತು ಪಾಲಿಕೆಯದ್ದೇ ಆಗಿರಲಿದೆ. ಯಾವುದೇ ಕಾರಣಕ್ಕೂ ಮಾಲೀಕತ್ವವನ್ನು ಖಾಸಗಿಯವರಿಗೆ ಬಿಟ್ಟುಕೊಡುವುದಿಲ್ಲ. ಅವರು ಕೆರೆ ನಿರ್ವಹಣೆ ಮತ್ತು ಅಭಿವದ್ಧಿಗೆ ಹಣ ಖರ್ಚು ಮಾಡಬೇಕು ಅಷ್ಟೇ. ಈ ವಿಷಯದಲ್ಲಿ ಆಸಕ್ತರ ಅಭಿಪ್ರಾಯ ಪಡೆಯಲಾಗುವುದು, ಸರ್ಕಾರದ ಷರತ್ತುಗಳನ್ನು ಒಪ್ಪಿಕೊಂಡವರಿಗೆ ನಿರ್ವಹಣೆಯ ಜವಾಬ್ದಾರಿ ವಹಿಸಲಾಗುತ್ತದೆ’ ಎಂದರು.

ADVERTISEMENT

ಇದನ್ನು ಬಲವಾಗಿ ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ಹಾಗೂ ಜಿ.ಆರ್.ಮೋಹನ್, ‘ಸ್ಥಳೀಯ ನಿವಾಸಿಗಳ ಸಂಘಗಳು, ಕೆರೆಯ ಅಕ್ಕಪಕ್ಕದ ನಿವಾಸಿಗಳಿಗೆ ಕೆರೆ ನಿರ್ವಹಣೆ ಜವಾಬ್ದಾರಿ ವಹಿಸಲು ನಮ್ಮ ಅಕ್ಷೇಪವೇನೂ ಇಲ್ಲ. ಆದರೆ, ಕಾರ್ಪೋರೇಟ್ ಕಂಪನಿಗಳ ವಿಚಾರದಲ್ಲಿ ಕೆಲವು ಅನುಮಾನಗಳಿವೆ. ಅಂತಿಮವಾಗಿ ನಗರದ ಕೆರೆಗಳು ಉಳಿಯಬೇಕು ಎಂಬುದಷ್ಟೇ ನಮ್ಮ ಉದ್ದೇಶ’ ಎಂದರು.

ಇದಕ್ಕೆ ಶಶಿಕಿರಣ್ ಶೆಟ್ಟಿ, ‘ಕೆರೆಗಳ ಉಳಿವಿಗೆ ಕಾರ್ಪೋರೇಟ್ ಕಂಪನಿಗಳ ನೆರವು ಅಗತ್ಯವಿದೆ. ನಿರ್ವಹಣೆಗೆ ಹಣ ಬೇಕು. ಈ ವಿಷಯದಲ್ಲಿ ಅರ್ಜಿದಾರರು ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ. ಕೆರೆಗಳು ಉಳಿಯಬೇಕೆಂಬುದೇ ಸರ್ಕಾರದ ಉದ್ದೇಶವೂ ಆಗಿದೆ. ಎಲ್ಲವನ್ನೂ ನೀತಿಯಲ್ಲಿ ವಿವರಿಸಲಾಗಿದೆ. ಅಂತೆಯೇ, ಅರ್ಜಿದಾರರ ಬಳಿ ಸೂಕ್ತ ಸಲಹೆಗಳಿದ್ದರೆ ಅವುಗಳನ್ನು ಸ್ವೀಕರಿಸಿ ನಿಯಮಾನುಸಾರ ಅಳವಡಿಸಿಕೊಳ್ಳಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ’ ಎಂದು ಭರವಸೆ ನೀಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಸರ್ಕಾರದ ನೀತಿಗೆ ಪೂರಕವಾದ ಸಲಹೆಗಳಿದ್ದರೆ ಅರ್ಜಿದಾರರು ಸರ್ಕಾರ ಮತ್ತು ಪಾಲಿಕೆಗೆ ಅವುಗಳನ್ನು ಸಲ್ಲಿಸಬಹುದು’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.