ಬೆಂಗಳೂರು: ‘ನಿಗಮ, ಮಂಡಳಿಗಳಿಗೆ ನೇಮಕ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ರವಾನಿಸಿದ್ದು, ಅದಕ್ಕೆ ಅಂಕಿತ ಪಡೆಯಬೇಕಾಗಿದೆ. ಹೀಗಾಗಿ ರಾಜ್ಯದ ನಾಯಕರು ದೆಹಲಿಗೆ ತೆರಳುತ್ತಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಶಿವಕುಮಾರ್, 'ದೆಹಲಿ ನಾಯಕರು ನಮ್ಮನ್ನು ಕರೆದಿಲ್ಲ. ನಾವೇ ಹೋಗುತ್ತಿದ್ದೇವೆ' ಎಂದರು.
'ಎಐಸಿಸಿ ಅಧ್ಯಕ್ಷರು ನಮ್ಮ ಗ್ಯಾರಂಟಿ ಯೋಜನೆಗಳ ಜಾರಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕ ಸಂಬಂಧ ನಿರ್ದೇಶನ ನೀಡಿದ್ದಾರೆ. ತಿಂಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಸಮಿತಿ ಮಾಡಲು ಪ್ರಸ್ತಾವ ಸಲ್ಲಿಸಲು ಶಾಸಕರಿಗೆ ಸೂಚಿಸುತ್ತೇವೆ' ಎಂದರು
ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಭೇಟಿ ವಿಚಾರವಾಗಿ ಕೇಳಿದಾಗ, ‘ನಾರಾಯಣಗೌಡರು ಕನ್ನಡದಲ್ಲಿ ನಾಮಫಲಕ ಹಾಕಲು ಹೋರಾಟ ಮಾಡುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರು ಹೋರಾಟಗಾರರು, ಹೋರಾಟ ಮಾಡುವುದು ಸಹಜ. ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆದೇಶ ಇದೆ. ಯಾರೋ ಅವರ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ಹೋರಾಟಗಾರರಿಗೆ ನಾವು ಎಷ್ಟು ಗೌರವ ನೀಡಬೇಕೋ ಅದನ್ನು ನೀಡಲೇಬೇಕು. ಅವರುಗಳ ಹೋರಾಟದಿಂದ ಕನ್ನಡ ಉಳಿಯುತ್ತಿದೆ. ಅವರಿಗೆ ರಾಜಕೀಯ ಬೇಡ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಬಾರದು ಎಂದು ಆಯುಕ್ತರಿಗೆ ಹೇಳಿದ್ದೇನೆ’ ಎಂದು ತಿಳಿಸಿದರು.
ಟ್ರ್ಯಾಪ್ ಮಾಡಲು ಪ್ರತಾಪ್ ಸಿಂಹ ಹುಡುಗನಲ್ಲ: ಸಂಸತ್ ಭದ್ರತಾ ವೈಫಲ್ಯ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡಲಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ, ‘ಅವರನ್ನು ಯಾರು ಟ್ರ್ಯಾಪ್ ಮಾಡುತ್ತಾರೆ? ಪ್ರತಾಪ್ ಸಿಂಹ ಅವರೇನೂ ಸಣ್ಣ ಹುಡುಗನಲ್ಲ, ನಾನೂ ಹುಡುಗನಲ್ಲ. ಇದು ನಮ್ಮ ಜವಾಬ್ದಾರಿ ಅಷ್ಟೇ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.