ಬೆಂಗಳೂರು: ಜೆ.ಪಿ. ನಗರ 9ನೇ ಹಂತದಲ್ಲಿರುವ ರಾಯಲ್ ಪಾರ್ಕ್ ರೆಸಿಡೆನ್ಸಿ ಬಡಾವಣೆಯ ಅರ್ಧ ಎಕರೆ ಪ್ರದೇಶದಲ್ಲಿ ನೆಟ್ಟ ಸಾವಿರದ ಮುನ್ನೂರು ಗಿಡಗಳ ‘ಮಿಯಾವಾಕಿ’ ಮಾದರಿಯ ಕಿರು ಅರಣ್ಯವನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.
‘ಮಿಯಾವಾಕಿ’ ಕಿರು ಅರಣ್ಯದ ರೂವಾರಿ ಮತ್ತು ಬಡಾವಣೆಯ ನಿವಾಸಿ ಚಂದ್ರಶೇಖರ್ ಕಾಕಾಲ್ ಮಾತನಾಡಿ, ‘ರಾಯಲ್ ಪಾರ್ಕ್ ಬಡಾವಣೆಯಲ್ಲಿ ನಾಲ್ಕು ವರ್ಷಗಳಲ್ಲಿ ಸುಮಾರು 4,000 ಸಸಿಗಳನ್ನು ಮಿಯಾವಾಕಿ ಮಾದರಿ ಕಿರು ಅರಣ್ಯದಲ್ಲಿ ನೆಟ್ಟು ಪೋಷಿಸುತ್ತಾ ಬಂದಿದ್ದೇವೆ. ಆ ಗಿಡಗಳು ಈಗ 20 ಅಡಿಗಿಂತಲೂ ಹೆಚ್ಚು ಎತ್ತರ ಹಾಗೂ ಒತ್ತೊತ್ತಾಗಿ ಬೆಳೆದು ಕಿರು ಅರಣ್ಯವೇ ಆಗಿದೆ‘ ಎಂದರು.
‘ಬಡಾವಣೆಯಲ್ಲಿ ಇಲ್ಲಿವರೆಗೂ ಮೂರು ಮಿಯಾವಾಕಿ ಮಾದರಿಯ ಕಿರು ಅರಣ್ಯಗಳನ್ನು ಮಾಡಿದ್ದೇವೆ. ಇದು ನಾಲ್ಕನೇ ಕಿರು ಅರಣ್ಯವಾಗಿ ರೂಪುಗೊಳ್ಳುತ್ತಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ‘ಟ್ರೀ ಡಾಕ್ಟರ್’ ಖ್ಯಾತಿಯ ಪರಿಸರವಾದಿ ವಿಜಯ್ ನಿಶಾಂತ್, ತಲಘಟ್ಟಪುರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಉಮೇಶ್ ಅವರು ಮಿಯಾವಾಕಿಯಲ್ಲಿ ಗಿಡಗಳನ್ನು ನೆಟ್ಟರು.
ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿರಾಜ್ ಬಲ್ಲಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಜೆ. ಶ್ರೀಪತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.