ಬೆಂಗಳೂರು: ಸಾರ್ವಜನಿಕರ ಮೊಬೈಲ್ಗಳನ್ನು ಕದ್ದು ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮೊಬೈಲ್ ಕಳ್ಳತನದ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈತ, ಹಲವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ. ಈತನಿಂದ ₹ 8 ಲಕ್ಷ ಮೌಲ್ಯದ 38 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಸ್ ನಿಲ್ದಾಣಗಳಲ್ಲಿ ಆರೋಪಿ ಸುತ್ತಾಡುತ್ತಿದ್ದ. ಬಸ್ ಹತ್ತುವ ನೆಪದಲ್ಲಿ ಸಂದಣಿಯಲ್ಲಿ ಜನರ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ’ ಎಂದು ತಿಳಿಸಿದರು.
ಪಾಸ್ವರ್ಡ್ ಬದಲಿಸಿ ಕೃತ್ಯ: ‘ಮೊಬೈಲ್ನಲ್ಲಿದ್ದ ಸಿಮ್ಕಾರ್ಡ್ ತೆಗೆಯುತ್ತಿದ್ದ ಆರೋಪಿ, ಬೇರೊಂದು ಮೊಬೈಲ್ಗೆ ಹಾಕುತ್ತಿದ್ದ. ಅದೇ ಮೊಬೈಲ್ನಲ್ಲಿ ಫೋನ್ ಪೇ, ಗೂಗಲ್ ಪೇ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುತ್ತಿದ್ದ. ನಂತರ, ಮೊಬೈಲ್ ಸಂಖ್ಯೆ ಸಹಾಯದಿಂದ ಒಟಿಪಿ ಪಡೆದು ಪಾಸ್ವರ್ಡ್ ಬದಲಾಯಿಸುತ್ತಿದ್ದ. ಬಳಿಕ, ಬ್ಯಾಂಕ್ ಖಾತೆಯಿಂದ ಬೇರೊಂದು ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.