ADVERTISEMENT

ಚಾಕು ತೋರಿಸಿ ನಗದು, ಮೊಬೈಲ್‌ ಸುಲಿಗೆ: ಆಟೊ ಚಾಲಕ ಸೇರಿ ಇಬ್ಬರ ಬಂಧನ

ಗೋವಿಂದರಾಜನಗರ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 15:21 IST
Last Updated 20 ಸೆಪ್ಟೆಂಬರ್ 2024, 15:21 IST
ಶಿವಕುಮಾರ್‌ 
ಶಿವಕುಮಾರ್‌    

ಬೆಂಗಳೂರು: ಆಟೊದಲ್ಲಿ ಪ್ರಯಾಣಿಸುವರಿಗೆ ಚಾಕು ತೋರಿಸಿ ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಆಟೊ ಚಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಂದಿನಿ ಲೇಔಟ್‌ನ ಜೈಮಾರುತಿ ನಗರದ ನಿವಾಸಿ ಶಿವಕುಮಾರ್‌(32) ಹಾಗೂ ಶ್ರೀನಿವಾಸ ನಗರದ ಗಣೇಶ ದೇವಸ್ಥಾನ ಬಳಿಯ ನಿವಾಸಿ ಮಂಟೆಪ್ಪ(52) ಬಂಧಿತರು.

ಪ್ರಯಾಣಿಕರಿಂದ ಸುಲಿಗೆ ಮಾಡಿದ್ದ ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ADVERTISEMENT

ವೆಸ್ಟ್‌ ಆಫ್‌ ಕಾರ್ಡ್ ರಸ್ತೆಯ ಶಿವನಹಳ್ಳಿಯ ನಿವಾಸಿ ರಾಮಕೃಷ್ಣಯ್ಯ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

‘ರಾಮಕೃಷ್ಣಯ್ಯ ಅವರು ಇತ್ತೀಚೆಗೆ ರಾತ್ರಿ 11 ಗಂಟೆ ಸುಮಾರಿಗೆ ನವರಂಗ ಚಿತ್ರಮಂದಿರ ಬಳಿ ಆಟೊ ಹತ್ತಿದ್ದರು. ಸ್ವಲ್ಪ ದೂರ ಪ್ರಯಾಣಿಸಿದ ಬಳಿಕ ಚಾಲಕ ಹಾಗೂ ಆತನ ಜತೆಯಲ್ಲಿದ್ದ ವ್ಯಕ್ತಿ ರಾಮಕೃಷ್ಣಯ್ಯ ಅವರಿಗೆ ಬೆದರಿಸಿದ್ದರು. ಬಳಿಕ ಚಾಕು ತೋರಿಸಿ ಮೊಬೈಲ್‌ ಫೋನ್‌ ಹಾಗೂ ನಗದು ಸುಲಿಗೆ ಮಾಡಿದ್ದರು. ನಂತರ, ವಿವಿಧೆಡೆ ಸುತ್ತಾಡಿಸಿ ಮಧ್ಯರಾತ್ರಿ 1.30ರ ಸುಮಾರಿಗೆ ಗೋವಿಂದರಾಜನಗರದ ಎಂಸಿ ಲೇಔಟ್‌ನ ಕ್ಯೂಟಿಸ್ ಆಸ್ಪತ್ರೆಯ ಬಳಿ ಬಿಟ್ಟು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

ಕೊಲೆ ಬೆದರಿಕೆ: ‘ಪೊಲೀಸರಿಗೆ ದೂರು ನೀಡಿದರೆ ಜೈಲಿನಿಂದ ಬಿಡುಗಡೆಯಾದ ಬಳಿಕ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆಟೊ ನೋಂದಣಿ ಸಂಖ್ಯೆ ಪತ್ತೆ ಹಚ್ಚಲಾಯಿತು. ಬಳಿಕ, ನಂದಿನಿ ಲೇಔಟ್‌ನ ಮಾರುತಿ ನಗರದ ರಸ್ತೆಯಲ್ಲಿ ಆಟೊ ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಮಂಟೆಪ್ಪ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.