ಬೆಂಗಳೂರು: ಸಾಲದ ಮರು ಪಾವತಿ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆಯಲ್ಲಿ ಕಾರ್ಮಿಕರೊಬ್ಬರನ್ನು ಕೊಲೆ ಮಾಡಲಾಗಿದೆ. ಸಿಂಗಸಂದ್ರದ ನಿವಾಸಿ ಗೋಪಾಲ (35) ಕೊಲೆಯಾದ ಕಾರ್ಮಿಕ.
ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
‘ಎಲೆಕ್ಟ್ರೀಷಿಯನ್ ಗಿರೀಶ್ ಎಂಬಾತ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆತನಿಗೆ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಕೆಲವು ತಿಂಗಳ ಹಿಂದೆ ಗೋಪಾಲನ ಸ್ನೇಹಿತ ಕರೀಗೌಡ ಎಂಬಾತನಿಂದ ಗಿರೀಶ್ ಒಂದೂವರೆ ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ. ಆದರೆ, ನಿಗದಿತ ಸಮಯಕ್ಕೆ ಸಾಲ ವಾಪಸ್ ನೀಡಿರಲಿಲ್ಲ. ಈ ವಿಚಾರವನ್ನು ಗೋಪಾಲನ ಬಳಿ ಕರೀಗೌಡ ಹೇಳಿಕೊಂಡಿದ್ದ. ಗೋಪಾಲ, ಗಿರೀಶ್ಗೆ ಕರೆ ಮಾಡಿ ಕರೀಗೌಡನ ಹಣ ವಾಪಸ್ ಕೊಡುವಂತೆ ಕೇಳಿಕೊಂಡಿದ್ದ. ಆಗ ಗಿರೀಶ್ ಹಣ ಕೊಡುವುದಾಗಿ ಹೇಳಿದ್ದ. ನಂತರ ಹಣ ವಾಪಸ್ ನೀಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದ’ ಎಂದು ಪೊಲೀಸರು ಹೇಳಿದರು.
‘ಕೆಲವು ದಿನಗಳ ನಂತರ ಬಾರ್ವೊಂದಕ್ಕೆ ಗೋಪಾಲ್ ಹಾಗೂ ಗಿರೀಶ್ ಮದ್ಯ ಸೇವಿಸಲು ಪ್ರತ್ಯೇಕವಾಗಿ ಬಂದಿದ್ದರು. ಅವರೊಂದಿಗೆ ಸ್ನೇಹಿತರೂ ಬಂದಿದ್ದರು. ಅಲ್ಲೂ ಸಾಲ ಮರು ಪಾವತಿ ವಿಚಾರಕ್ಕೆ ಗಲಾಟೆ ನಡೆದಿದೆ. ಬಾರ್ನಿಂದ ಹೊರ ತೆರಳಿದ ಮೇಲೂ ನಡೆದ ಗಲಾಟೆಯಲ್ಲಿ ಗೋಪಾಲ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.