ADVERTISEMENT

ಮುಂಗಾರು ಹಿನ್ನೆಲೆ: ಮುಂಜಾಗ್ರತೆಗೆ ಬಿಬಿಎಂಪಿ ಒತ್ತು

​ಪ್ರಜಾವಾಣಿ ವಾರ್ತೆ
Published 4 ಮೇ 2024, 22:47 IST
Last Updated 4 ಮೇ 2024, 22:47 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ನಗರದಲ್ಲಿ ಪೂರ್ವ ಮುಂಗಾರು ಆರಂಭದ ಮುನ್ಸೂಚನೆ ದೊರೆತಿದ್ದು, ಮೇ 10ರವರೆಗೆ ಎಲ್ಲೆಡೆ ‘ತೀವ್ರತರ ಸ್ವಚ್ಛತಾ ಕಾರ್ಯ’ ನಡೆಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಮೇನಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 3ರವರೆಗೆ ಕೈಗೊಳ್ಳಲಾಗಿದ್ದ ‘ಮಾಸಾರ್ಧ ಸ್ವಚ್ಛತಾ ಕಾರ್ಯಕ್ರಮ’ ಮುಂದುವರಿಸಲಾಗಿದೆ. ಈಗಾಗಲೇ ಶೇ 75ರಷ್ಟು ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಬೆಸ್ಕಾಂ, ಜಲಮಂಡಳಿ ಸೇರಿದಂತೆ ಎಲ್ಲ ಇಲಾಖೆಗಳೂ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮೇ ಅಂತ್ಯದೊಳಗೆ ಮುಗಿಸಲು ಸೂಚಿಸಲಾಗಿದೆ. ರಸ್ತೆ, ಚರಂಡಿ, ರಾಜಕಾಲುವೆಗಳ ಸ್ವಚ್ಛತೆಯನ್ನು ತೀವ್ರರೂಪದಲ್ಲಿ ಕೈಗೊಳ್ಳಲು ಮುಖ್ಯ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ಪ್ರತಿ ತಿಂಗಳ ಮೂರನೇ ವಾರವೂ ‘ತೀವ್ರತರ ಸ್ವಚ್ಛತಾ ಕಾರ್ಯ’ ಕೈಗೊಳ್ಳಲೂ ಸೂಚಿಸಲಾಗಿದೆ. ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತದೆ.‌ ಬಿಬಿಎಂಪಿಯ 63 ಉಪ ವಿಭಾಗಗಳಿಗೆ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗಿದ್ದು, ಮೂರು ಪಾಳಿಯಲ್ಲಿ ಕೆಲಸ ನಿರ್ವಹಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ನಗರದ ನಾಗರಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಚರಂಡಿಗೆ ತ್ಯಾಜ್ಯ ಸೇರಿ ಅನುಪಯುಕ್ತ ವಸ್ತುಗಳನ್ನು ಹಾಕಬಾರದು. ರಾಜಕಾಲುವೆಗಳಲ್ಲಿ ಹಾಸಿಗೆ, ಬಳಸಿದ ಗೃಹೋಪಯೋಗಿ ವಸ್ತುಗಳು ಸಿಗುತ್ತಿವೆ. ಯಾವುದೇ ರೀತಿಯ ತ್ಯಾಜ್ಯವನ್ನು ಚರಂಡಿಗೆ ಹಾಕುವುದು ದಂಡನೀಯ ಅಪರಾಧ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.