ಬೆಂಗಳೂರು: ಗಿರಿನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಮಗುವನ್ನು ಕೂಡಿಹಾಕಿ ಹಲ್ಲೆ ಮಾಡಲಾಗಿದ್ದು, ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ.
‘ಎರಡೂವರೆ ವರ್ಷದ ಮಗುವಿನ ಮೇಲೆ ತಾಯಿ ಹಲ್ಲೆ ಮಾಡಿದ್ದಾರೆ. ಮಗುವಿನ ಕೂಗಾಟ ಕೇಳಿ ಸ್ಥಳಕ್ಕೆ ಹೋದಾಗ ವಿಷಯ ಗೊತ್ತಾಯಿತು. ಸಂಘಟನೆಯೊಂದರ ನೆರವಿನಿಂದ ಮಗುವನ್ನು ರಕ್ಷಿಸಲಾಗಿದೆ’ ಎಂದು ಸ್ಥಳೀಯರೊಬ್ಬರು ಹೇಳಿದರು.
‘ಪತಿಗೆ ವಿಚ್ಛೇದನ ನೀಡಿರುವ ಮಹಿಳೆ, ಮಗುವಿನ ಜೊತೆ ವಾಸವಿದ್ದಾರೆ. ಸ್ನೇಹಿತರೊಬ್ಬರ ಜೊತೆ ಸಲುಗೆ ಹೊಂದಿದ್ದಾರೆ. ಮನೆಯಲ್ಲಿ ಮಗುವಿನ ಮೇಲೆ ತಾಯಿ ಹಾಗೂ ಸ್ನೇಹಿತ, ಹಲವು ಬಾರಿ ಹಲ್ಲೆ ಮಾಡಿದ್ದಾರೆ. ಇಬ್ಬರೂ ಹೊರಗೆ ಹೋಗುವಾಗ ಮನೆಯಲ್ಲಿಯೇ ಮಗುವನ್ನು ಕೂಡಿ ಹಾಕುತ್ತಿದ್ದರು’ ಎಂದು ತಿಳಿಸಿದರು.
‘ತಾಯಿ ಬೆಳಿಗ್ಗೆ ಕೆಲಸಕ್ಕೆ ಹೋಗಿ ಮನೆಗೆ ರಾತ್ರಿ ವಾಪಸು ಬರುತ್ತಿದ್ದರು. ಅಲ್ಲಿಯವರೆಗೂ ಮಗು ಮನೆಯೊಳಗೆ ಇರುತ್ತಿತ್ತು. ಕಿಟಕಿ ಬಳಿ ನಿಂತು ಅಳುತ್ತಿತ್ತು’ ಎಂದರು.
‘ಮಗುವಿನ ಮೇಲಿನ ಹಲ್ಲೆಯನ್ನು ಸಮರ್ಥಿಸಿಕೊಂಡಿರುವ ತಾಯಿ, ‘ಪತಿಗೆ ವಿಚ್ಛೇದನ ನೀಡಿ, ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಮಗುವಿಗೆ ಜೀವನ ಪಾಠ ತಿಳಿಯಲೆಂದು ಈ ರೀತಿ ಮಾಡಿದೆ’ ಎನ್ನುತ್ತಿದ್ದಾರೆ’ ಎಂದು ಸ್ಥಳೀಯರೊಬ್ಬರು ವಿವರಿಸಿದರು.
ಮಗುವಿನ ಮೇಲಿನ ಹಲ್ಲೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.