ADVERTISEMENT

‘ಮುದ್ದಣ ಕೃತಿ ಕರಜನ’ ಕೃತಿ ಬಿಡುಗಡೆ: ಸ್ಥಿತ್ಯಂತರ ಕಾಲದ ಕವಿ ಮುದ್ದಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 16:32 IST
Last Updated 16 ಅಕ್ಟೋಬರ್ 2024, 16:32 IST
ಎ.ವಿ. ನಾವಡ ಅವರು ಸಂಪಾದಿಸಿರುವ ‘ಮುದ್ದಣ ಕೃತಿ ಕರಜನ’ ಕಾವ್ಯ ಸಂಪುಟದ ಮೊದಲ ಪ್ರತಿಯನ್ನು ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ಸ್ವೀಕರಿಸಿದರು.. ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಭಾಗವಹಿಸಿದ್ದರು
- ಪ್ರಜಾವಾಣಿ ಚಿತ್ರ
ಎ.ವಿ. ನಾವಡ ಅವರು ಸಂಪಾದಿಸಿರುವ ‘ಮುದ್ದಣ ಕೃತಿ ಕರಜನ’ ಕಾವ್ಯ ಸಂಪುಟದ ಮೊದಲ ಪ್ರತಿಯನ್ನು ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ಸ್ವೀಕರಿಸಿದರು.. ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಭಾಗವಹಿಸಿದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಳೆಗನ್ನಡ ಹಿಂದಕ್ಕೆ ಸರಿದು ಹೊಸಗನ್ನಡ ಮುನ್ನೆಲೆಗೆ ಬರುವ ಸ್ಥಿತ್ಯಂತರ ಕಾಲದ ಕವಿ ಮುದ್ದಣ ಎಂದು ಸಂಶೋಧಕ ಹಂಪ ನಾಗರಾಜಯ್ಯ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಎ.ವಿ. ನಾವಡ ಸಂಪಾದಿಸಿದ ‘ಮುದ್ದಣ ಕೃತಿ ಕರಜನ’ವನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ತುಳು ಸೇರಿದಂತೆ ಪ್ರಾದೇಶಿಕ ಘಾಟಿನ ಭಾಷೆಯನ್ನು ಬಳಸಿರುವ ಮುದ್ದಣ ಹಳೆಗನ್ನಡ, ಹೊಸಗನ್ನಡವನ್ನು ಹಿತವಾಗಿ ಬೆಸೆದ ಬರಹಗಾರ. ಸರಾಗವಾಗಿ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಶೈಲಿ ಅವರದ್ದು ಎಂದು ಬಣ್ಣಿಸಿದರು.

ADVERTISEMENT

ಹಳೆಗನ್ನಡ ಕಾವ್ಯಗಳು ಈಗ ಕಪಾಟುಗಳಲ್ಲಿಯೇ ಉಳಿಯುತ್ತಿವೆ. ಹೊಸ ತಲೆಮಾರಿನ ಓದುಗರೂ ಆಸಕ್ತಿ ವಹಿಸುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿಯೂ ಮನ್ನಣೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೃತಿ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಮುದ್ದಣ ಬರೆದ ರತ್ನಾವತಿ ಕಲ್ಯಾಣ, ಕುಮಾರವಿಜಯ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ, ಶ್ರೀ ರಾಮಾಶ್ವಮೇಧ ಕೃತಿಗಳು ಜೊತೆಗೆ ಬೇರೆ ಹಾಡುಗಳು ಎಲ್ಲವನ್ನು ಸೇರಿಸಿ ತಂದಿರುವ ಈ ಕೃತಿಯು ಗ್ರಂಥ ಸಂಪಾದನೆ ಶಾಸ್ತ್ರದ ಉತ್ತಮ ಆಕರವಾಗಿದೆ. ಆಕರಸೂಚಿ, ಪಠ್ಯ, ತದ್ಭವ, ತುಳುಪದ, ನಿಘಂಟು ಹೀಗೆ ಎಲ್ಲವನ್ನು ಈ ಗ್ರಂಥ ಒಳಗೊಂಡಿದೆ’ ಎಂದು ವಿವರಿಸಿದರು.

ಮುದ್ದಣ ತನ್ನ ಕಾವ್ಯಕ್ಕೆ ಸೃಷ್ಟಿಸಿದ ಅದ್ಭುತ ವಿಮರ್ಶಕಿಯೇ ಮನೋರಮೆ. ಈ ರೀತಿಯ ಸಂಭಾಷಣೆಯನ್ನು ಕಟ್ಟಿಕೊಟ್ಟ ಮೊದಲ ಮತ್ತು ಕೊನೆಯ ಕವಿ ಆತ. ತನ್ನ ಕಥೆಯನ್ನೇ ಹೇಳುವ, ಕೇಳುವ ಹಿಂದಿನ ಪರಂಪರೆಯ ಮುಂದುವರಿದ ಭಾಗ ಅವರು ಎಂದು ಹೇಳಿದರು.

ಕೃತಿಕಾರ ಎ.ವಿ. ನಾವಡ ಮಾತನಾಡಿ, ‘ಮುದ್ದಣ ಬರೆದ ಹಸ್ತಪ್ರತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿದೆ. ಅದನ್ನು ಪ್ರಕಟಿಸುವ ಬುದ್ಧಿ ವಿಶ್ವವಿದ್ಯಾಲಯಕ್ಕೆ ಬರಲಿ’ ಎಂದು ಹಾರೈಸಿದರು.

ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್, ಶೇಷಾದ್ರಿಪುರ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ, ಶೇಷಾದ್ರಿಪುರ ಸಂಜೆ ಕಾಲೇಜಿನ ಪ್ರಾಂಶುಪಾಲ ಎನ್‌.ಎಸ್‌. ಸತೀಶ್‌, ಗೋಧೂಳಿ ಕನ್ನಡ ಸಂಘದ ಸಂಚಾಲಕ ಸತ್ಯಮಂಗಲ ಮಹಾದೇವ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.