ಬೆಂಗಳೂರು: ಜೀವನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದ್ದ ವಿಘ್ನೇಶ್ ಅಲಿಯಾಸ್ ಅಪ್ಪು (34) ಎಂಬುವವರ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೀವನಹಳ್ಳಿಯ ಅರುಣ್ ಕುಮಾರ್, ಜಾನ್ ಜಾಕೋಬ್ ಆ್ಯಂಡ್ರೊ, ಪ್ರಶಾಂತ್, ಸಂಜೀವ್ ಬಂಧಿತರು.
ಆರೋಪಿಗಳು ಜೂನ್ 29ರಂದು ರಾತ್ರಿ ಕುರುಬರಹಳ್ಳಿ ನಿವಾಸಿ ವಿಘ್ನೇಶ್ ಅವರಿಗೆ ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಪರಾರಿ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಳೇ ದ್ವೇಷ: ಅಪ್ಪು ಅವರು ವಾಸವಿದ್ದ ಜೀವನಹಳ್ಳಿ ಕೊಳೆಗೇರಿಯಲ್ಲಿ ಪ್ರಾಬಲ್ಯ ಸಾಧಿಸಲು ಹುಡುಗರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಆರೋಪಿಗಳಾದ ಅರುಣ್ ಕುಮಾರ್ ಮತ್ತು ಜಾನ್ ಜಾಕೋಬ್ ಮೇಲೂ ಹಲ್ಲೆ ಆಗಿದ್ದು, ಅವರು ದ್ವೇಷ ಸಾಧಿಸುತ್ತಿದ್ದರು. ಕಳೆದ ಶನಿವಾರ ಜೀವನಹಳ್ಳಿಗೆ ಬಂದಿದ್ದ ಅಪ್ಪು ಮತ್ತೆ ಅರುಣ್, ಜಾನ್ ಜತೆಗೆ ಗಲಾಟೆ ಮಾಡಿದ್ದರು. ಆಗ ಸಿಟ್ಟಿಗೆದ್ದು ಕೊಲೆ ಮಾಡಿದ್ದರು ಎಂದು ತಿಳಿಸಿದ್ದಾರೆ.
ಅಪ್ಪು ವಿರುದ್ಧ ಈ ಹಿಂದೆ ಪುಲಕೇಶಿನಗರ ಠಾಣೆಯಲ್ಲಿ ಮಾದಕವಸ್ತು ಮಾರಾಟದ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.