ADVERTISEMENT

ಬಿಹಾರದ ಯುವಕನ ಕೊಲೆ: ಇಬ್ಬರ ಸೆರೆ

ಕೆಲಸದಿಂದ ತೆಗೆಸಿದ್ದಕ್ಕೆ ಮದ್ಯ ಸೇವಿಸಿ ಬಂದು ಗಲಾಟೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 15:19 IST
Last Updated 4 ಅಕ್ಟೋಬರ್ 2024, 15:19 IST
ಸುಜಿತ್‌ 
ಸುಜಿತ್‌    

ಬೆಂಗಳೂರು: ಮೈಕೋಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಬಿಳೇಕಹಳ್ಳಿಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಕೊಲೆ ಆರೋಪದಡಿ ಮೃತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. 

ಬಿಹಾರದ ಸುಜಿತ್(22) ಕೊಲೆಯಾದವವರು.‌ ಕೃತ್ಯ ಎಸಗಿದ ಸ್ನೇಹಿತರಾದ ಸಂಜಯ್(24) ಮತ್ತು ಅವಾನ್(24) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳು, ಸುಜಿತ್ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

‘ಸುಜಿತ್ ಹಾಗೂ ಆರೋಪಿಗಳು ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬಿಳೇಕಹಳ್ಳಿಯ ಪ್ಲೈವುಡ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಅಂಗಡಿಯಲ್ಲೇ ಮಲಗುತ್ತಿದ್ದರು. ಸುಜಿತ್ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ಆರೋಪವಿತ್ತು. ರಾತ್ರಿ ಮದ್ಯ ಸೇವಿಸಿ ಬಂದು ಗಲಾಟೆ ನಡೆಸುತ್ತಿದ್ದರು. ಇದೇ ವಿಚಾರಕ್ಕೆ ಮೂವರ ಮಧ್ಯೆ ಗಲಾಟೆ ನಡೆಯುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ವಿಚಾರದಿಂದ ಬೇಸತ್ತು ಸುಜಿತ್‌ ಅವರನ್ನು ಮಾಲೀಕರು ಕೆಲಸದಿಂದ ತೆಗೆದಿದ್ದರು. ಅದರಿಂದ ಕೋಪಗೊಂಡಿದ್ದ ಸುಜಿತ್ ಬೇರೆಡೆ ವಾಸವಾಗಿದ್ದರು. ಆದರೂ, ಪ್ಲೈವುಡ್‌ ಅಂಗಡಿ ಬಳಿ ಬಂದು, ಮಾಲೀಕರು ಕೆಲಸದಿಂದ ತೆಗೆಯಲು ನೀವೇ ಕಾರಣವೆಂದು ಇಬ್ಬರು ಸ್ನೇಹಿತರ ಜತೆಗೆ ಗಲಾಟೆ ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಗುರುವಾರ ರಾತ್ರಿ ಮದ್ಯ ಸೇವಿಸಿ ಬಂದಿದ್ದ ಸುಜಿತ್ ಅವರು ಆರೋಪಿಗಳ ಜತೆಗೆ ಜಗಳ ಮಾಡಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿ ಆರೋಪಿಗಳು ಸುಜಿತ್ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.