ADVERTISEMENT

ನಾಮಫಲಕ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ‍ಪರಿವೀಕ್ಷಣೆ

ಶೇ 60 ರಷ್ಟು ಕನ್ನಡ ಬಳಸದ ಮಳಿಗೆಗಳಿಗೆ ಕಾನೂನಿನ ಅರಿವು *ಕನ್ನಡ ಅಳವಡಿಸಿಕೊಳ್ಳುವಂತೆ ಮನವಿ

ವರುಣ ಹೆಗಡೆ
Published 15 ಅಕ್ಟೋಬರ್ 2024, 21:44 IST
Last Updated 15 ಅಕ್ಟೋಬರ್ 2024, 21:44 IST
<div class="paragraphs"><p>ಪುರುಷೋತ್ತಮ ಬಿಳಿಮಲೆ</p></div>

ಪುರುಷೋತ್ತಮ ಬಿಳಿಮಲೆ

   

ಬೆಂಗಳೂರು: ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಗರದಲ್ಲಿ ಶೀಘ್ರದಲ್ಲಿಯೇ ‍ಪರಿವೀಕ್ಷಣೆ ನಡೆಸಲಿದ್ದು, ಶೇ 60ರಷ್ಟು ಕನ್ನಡ ಅಳವಡಿಸಿಕೊಳ್ಳದ ಮಳಿಗೆಗಳಿಗೆ ಕಾನೂನು ಅರಿವು ಮೂಡಿಸಲಿದೆ.

ನಾಮಫಲಕಗಳಲ್ಲಿ ಕನ್ನಡ ಭಾಷೆ ಅಳವಡಿಕೆಗೆ ಸಂಬಂಧ ನಡೆದ ಹೋರಾಟದ ಬಳಿಕ ಸರ್ಕಾರವು ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಭಾಷೆ ಬಳಸಲು ಗಡುವು ನೀಡಿತ್ತು. ಗಡುವಿನೊಳಗೆ ಫಲಕ ಅಳವಡಿಸದ ಮಳಿಗೆಗಳ ಮಾಲೀಕರಿಗೆ ನೋಟಿಸ್‌ ನೀಡಿ, ಕಾನೂನು ಅನುಸಾರ ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಳ್ಳುವಂತೆ ಪಾಲಿಕೆ ಸೂಚಿಸಿತ್ತು. ನಂತರವೂ ಕನ್ನಡ ಅಳವಡಿಸಿಕೊಳ್ಳದ ಮಳಿಗೆಗಳಿಗೆ ತಾತ್ಕಾಲಿಕವಾಗಿ ಬಿಬಿಎಂಪಿ ಬೀಗ ಹಾಕಿತ್ತು. ಕೆಲ ಮಳಿಗೆಗಳಲ್ಲಿ ಈಗಲೂ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಅಳವಡಿಸದಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. 

ADVERTISEMENT

ಈ ಬಗ್ಗೆ ಮಹಾತ್ಮ ಗಾಂಧಿ ರಸ್ತೆ (ಎಂ.ಜಿ. ರಸ್ತೆ) ಸೇರಿ ನಗರದ ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ
ದೊಳಗೆ ಜಾಗೃತಿ ಪ್ರಾರಂಭಿಸಲು ಪ್ರಾಧಿಕಾರ ಯೋಜನೆ ರೂಪಿಸಿದೆ. ‘ಎಲ್ಲೆಲ್ಲೂ ಕನ್ನಡ; ಎಲ್ಲೆಡೆ ಕನ್ನಡ’ ಎಂಬ ಜಾಗೃತಿ ಜಾಥಾ ಅಭಿಯಾನವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಈ ಜಾಥಾದಲ್ಲಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರ ಜತೆಗೆ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಮತ್ತು ಕನ್ನಡ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ.

ಮಳಿಗೆಗಳಿಗೆ ಆದೇಶ ಪ್ರತಿ: ತೆರೆದ ವಾಹನದಲ್ಲಿ ಜಾಥಾ ಸಾಗಲಿದೆ. ಸೂಚನೆ ಪಾಲಿಸದ ಮಳಿಗೆಗಳ ಪ್ರತಿನಿಧಿಗಳಿಗೆ ಸರ್ಕಾರಿ ಆದೇಶದ ಪ್ರತಿ ಹಾಗೂ ಕರಪತ್ರಗಳನ್ನು ವಿತರಿಸಿ, ನಾಮಫಲಕಗಳಲ್ಲಿ ಕನ್ನಡ ಬಳಸಲು ಮನವಿ ಮಾಡಿಕೊಳ್ಳಲಾಗುತ್ತದೆ. ಧ್ವನಿವರ್ಧಕಗಳ ಮೂಲಕವೂ ಮನವಿ, ಕನ್ನಡ ಗೀತೆಗಳ ಗಾಯನವೂ ನಡೆಯಲಿದೆ. 

‘ಎಂ.ಜಿ. ರಸ್ತೆಯಿಂದ ಜಾಗೃತಿ ಜಾಥಾ ಪ್ರಾರಂಭವಾಗಲಿದೆ. ವಿವಿಧೆಡೆ ನಡೆಯುವ ಜಾಥಾಕ್ಕೆ ಗಣ್ಯರು ಚಾಲನೆ ನೀಡುತ್ತಾರೆ. ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಅಳವಡಿಕೆಯ ಸರ್ಕಾರಿ ಆದೇಶವನ್ನು ಕೆಲ ಮಳಿಗೆಗಳು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಈ ಬಗ್ಗೆ ಜಾಗೃತಿ ಜಾಥಾದ ಯೋಜನೆ ರೂಪಿಸಿದ್ದೇವೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು. 

ಪ್ರಮುಖ ಸ್ಥಳಗಳಲ್ಲಿ ಜಾಗೃತಿ

ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್, ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ಎಸ್‌.ಪಿ.ರಸ್ತೆ, ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಕೆಂಪೇಗೌಡ ರಸ್ತೆ, ಸುಬೇದಾರ್ ಛತ್ರಮ್ ರಸ್ತೆ, ಬಳೆಪೇಟೆ, ಉಪ್ಪಾರಪೇಟೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಅವೆನ್ಯೂ ರಸ್ತೆ, ಜಯನಗರ, ಡಿವಿಜಿ ರಸ್ತೆ, ದೊಡ್ಡಬಸವಣ್ಣನ ಗುಡಿ ಮುಖ್ಯರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರ, ಕೋರಮಂಗಲ ಮುಖ್ಯರಸ್ತೆ ಸೇರಿ ನಗರದ ಪ್ರಮುಖ ರಸ್ತೆ ಹಾಗೂ ಸ್ಥಳಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜಾಗೃತಿ ಜಾಥಾ ನಡೆಯಲಿದೆ.

ನಿಗದಿತ ಸಮಯದಲ್ಲಿ ನಾಮಫಲಕದಲ್ಲಿ ಕನ್ನಡ ಬಳಸದ ಉದ್ದಿಮೆಗಳ ಪರವಾನಗಿ ನವೀಕರಣ ಮಾಡದಂತೆ ಬಿಬಿಎಂಪಿಗೆ ಶಿಫಾರಸು ಮಾಡಲಾಗುತ್ತದೆ
ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.