ಬೆಂಗಳೂರು: ಹೆಸರಘಟ್ಟದ ಐಐಎಚ್ಆರ್ ಆವರಣದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ದ ಎರಡನೇ ದಿನವಾದ ಬುಧವಾರ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.
ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ರೈತರು ಮೇಳದಲ್ಲಿ ಮಾಹಿತಿ ಪಡೆದರು. ನಗರ ನಿವಾಸಿಗಳು ಮಣ್ಣು ರಹಿತ ಕೃಷಿ, ಲಂಬ ಕೃಷಿ (ವರ್ಟಿಕಲ್ ಗಾರ್ಡನ್), ಹೈಡ್ರೋಫೋನಿಕ್ಸ್ ನಂತಹ ಕೃಷಿ ಕುರಿತು ವಿಜ್ಞಾನಿಗಳಿಂದ ಮಾರ್ಗದರ್ಶನ ಪಡೆದರು. ನಗರ ಕೃಷಿ, ತಾರಸಿ ತೋಟ, ಮಣ್ಣು ರಹಿತ ಕೃಷಿಗೆ ಸಂಬಂಧಿಸಿದಂತೆ ಐಐಎಚ್ಆರ್ ಮೂರು ದಿನಗಳ ಕಾರ್ಯಾಗಾರವನ್ನು ಆಯೋಜಿಸಿದೆ.
ಮೇಳಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಐಐಎಚ್ಆರ್ನ ಆವರಣದಲ್ಲಿ ಬೆಳೆದಿರುವ ಆಕರ್ಷಕ ಹೂವಿನ ಲೋಕದಲ್ಲಿ ನಿಂತುಕೊಂಡು ಸೆಲ್ಫಿಗೆ ಪೋಸ್ ನೀಡುತ್ತಿದ್ದರೆ, ಇತ್ತ ರೈತರು ಕೃಷಿಯಲ್ಲಿನ ಹೊಸ ತಂತ್ರಜ್ಞಾನದ ಹುಡುಕಾಟದಲ್ಲಿ ನಿರತರಾಗಿದ್ದರು.
ತೋಟದಲ್ಲೇ ದಿನ ಕಳೆದ ಜನ: ಹೂವಿನ ಗಿಡ, ಆಲಂಕಾರಿಕ ಪುಷ್ಪಗಳು, ಔಷಧೀಯ ಗಿಡಗಳು, ಸೌಗಂಧಿಕ ಬೆಳೆಗಳು, ಅಣಬೆ ಬೆಳೆಗಳ ಉತ್ಪಾದನೆ ಮತ್ತು ಮೌಲ್ಯವರ್ಧಿತ ತಂತ್ರಜ್ಞಾನಗಳ ನೋಟ ಮೇಳಕ್ಕೆ ಮೆರುಗು ನೀಡುತ್ತಿವೆ. ಪ್ರತಿಯೊಂದು ತಾಕಿಗೆ ಅಳವಡಿಸಿರುವ ಕ್ಯೂಆರ್ ಕೋಡ್ ಅನ್ನು ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿದ ರೈತರು ಮತ್ತು ಯುವಕರು ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು.
‘ಮಾವಿನ ಬೆಳೆಯಲ್ಲಿ ಬೇರೆ ಯಾವ ಬೆಳೆಗಳನ್ನು ಹಾಕಬಹುದು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ತೋಟಗಾರಿಕೆ ಮೇಳಕ್ಕೆ ಬಂದಿದ್ದೇನೆ. ಇಲ್ಲಿರುವ ನೂತನ ತಂತ್ರಜ್ಞಾನವನ್ನು ಅರಿತುಕೊಂಡು, ನಮ್ಮ ತೋಟದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ವಿಜ್ಞಾನಿಗಳೊಂದಿಗೆ ಚರ್ಚಿಸುತ್ತೇನೆ. ನಂತರ ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವ ಚಿಂತನೆಯೂ ಇದೆ’ ಎಂದು ಧಾರವಾಡದ ರೈತ ಪ್ರಕಾಶ ಹೇಳಿದರು.
ಅಬ್ಬಬ್ಬಾ ಅಂದರೆ ಅಲಸಂದೆ ಐದಾರು ಇಂಚು ಉದ್ದ ಬೆಳೆಯುತ್ತದೆ. ಇಲ್ಲಿನ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಬರೋಬ್ಬರಿ 3–4 ಮೀಟರ್ ಉದ್ದದ ಅಲಸಂದೆ ರೈತರು ಹಾಗೂ ವೀಕ್ಷಕರ ಗಮನ ಸೆಳೆಯಿತು. ಇದರ ಕಾಯಿಗಳು 80 ಸೆ.ಮೀ ಬೆಳೆಯುತ್ತದೆ. ಈ ತಳಿಯು ತಿಳಿ ಹಸಿರು ಬಣ್ಣದ ದುಂಡಗೆ ಪೆನ್ಸಿಲ್ ಆಕಾರದ ನಾರು ರಹಿತ ಕಾಯಿಗಳನ್ನು ಬಿತ್ತನೆ ಮಾಡಿದ ಸರಾಸರಿ 60 ದಿನಗಳಲ್ಲಿ ಬಿಡುತ್ತದೆ. ಒಂದು ಹೆಕ್ಟೇರ್ಗೆ 25 ಟನ್ ಇಳುವರಿಯನ್ನು ಪಡೆಯಬಹುದು.
ಮೇಳದಲ್ಲಿ ರೈತರು ಮೊದಲು ಪ್ರಾಯೋಗಿಕ ತಾಕುಗಳಿಗೆ, ನಂತರ ನರ್ಸರಿ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದರು. ಮಾವು, ನಿಂಬೆ, ಸಪೋಟ ಸೇರಿದಂತೆ, ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಖರೀದಿಸಿದರು.
‘ಇಲ್ಲಿ ಸಿಗುವಂತಹ ಗುಣಮಟ್ಟದ ಗಿಡಗಳು ಬೇರೆ ಎಲ್ಲಿಯೂ ಸಿಗುವುದಿಲ್ಲ. ಹಾಗಾಗಿ ಗಿಡ
ಗಳ ಖರೀದಿಸಲು ಮೇಳಕ್ಕೆ ಬಂದಿದ್ದೇನೆ’ ಎಂದು ಬೆಂಗಳೂರು ಉತ್ತರ ತಾಲ್ಲೂಕಿನ ಅಗ್ರಹಾರದ ರೇಣು ಹೇಳಿದರು. ‘ಪ್ರತಿ ವರ್ಷ ಮೇಳಕ್ಕೆ ಬರುತ್ತೇನೆ. ಈ ಬಾರಿ ಕುಂಡದಲ್ಲಿ ಬೆಳೆಸುವಂತಹ ಗಿಡಗಳು ಅಷ್ಟಾಗಿ ಸಿಗಲಿಲ್ಲ. ಅದೊಂದು ಬೇಸರ ತಂದಿದೆ’ ಎಂದು ಹೆಸರಘಟ್ಟ ಪಕ್ಕದ ಹುರುಳಿ
ಚಿಕ್ಕನಹಳ್ಳಿಯ ಮೇರಿ ವಿಮಲ ಹೇಳಿದರು. ‘ಬಹಳ ಬಿಸಿಲಿದೆ. ಇನ್ನು ಮುಂದೆ ಜನವರಿ ಮತ್ತು ಫೆಬ್ರುವರಿಯಲ್ಲಿ ಮೇಳ ಆಯೋಜಿಸಿದರೆ, ಜನರಿಗೆ ಅನುಕೂಲ’ ಎಂದೂ ಸಲಹೆ ನೀಡಿದರು.
ಮೇಳದಲ್ಲಿ ಪ್ಯಾಟಿಪ್ಯಾನ್ ಎಂಬ ನಕ್ಷತ್ರ ಆಕಾರದ ಕುಂಬಳ ಕಾಯಿಯನ್ನು ರೈತರು ಬಹಳ ಕುತೂಹಲದಿಂದ ವೀಕ್ಷಿಸಿದರು. ‘ಇದರಲ್ಲಿ ಸಕ್ಕರೆ ಅಂಶ ಕಡಿಮೆ ಇದೆ. ಹೆಕ್ಟೇರ್ಗೆ ಕನಿಷ್ಠ 55 ಟನ್ ಇಳುವರಿ ನೀಡಲಿದ್ದು, 60 ದಿನಗಳಲ್ಲಿ 300 ರಿಂದ 400 ಗ್ರಾಮ ತೂಕದ ಕಾಯಿಗಳನ್ನು ಬಿಡುತ್ತದೆ. ಇದನ್ನು ಅಭಿವೃದ್ಧಿಪಡಿಸಿ ಬಹಳ ವರ್ಷಗಳಾಗಿವೆ. ಇನ್ನೂ ಹೆಚ್ಚು ಜನರಿಗೆ ತಲುಪಬೇಕಿದೆ’ ಎಂದು ವಿಜ್ಞಾನಿ ರಾಜಾ ಶಂಕರ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.