ಬೆಂಗಳೂರು: ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಬಾಂಗ್ಲಾದೇಶದ ಇಬ್ಬರು ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬೆಂಗಳೂರಿನಲ್ಲಿ ಗುರುವಾರ ಬಂಧಿಸಿದ್ದಾರೆ.
‘ಮೊಹಮ್ಮದ್ ಸಾಜೀದ್ ಹಲ್ದಾರ್ ಹಾಗೂ ಇದ್ರಿಸ್ ಬಂಧಿತರು. ಬಾಂಗ್ಲಾದೇಶದ ಪ್ರಜೆಗಳನ್ನು ಅಕ್ರಮವಾಗಿ ಭಾರತದೊಳಗೆ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳು, 2023ರ ನವೆಂಬರ್ನಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಸಹಾಯದಿಂದ ಇಬ್ಬರನ್ನೂ ಸೆರೆ ಹಿಡಿಯಲಾಗಿದೆ’ ಎಂದು ಎನ್ಐಎ ಮೂಲಗಳು ಹೇಳಿವೆ.
‘ಆರೋಪಿಗಳು ತಮ್ಮದೇ ಜಾಲ ಸೃಷ್ಟಿಸಿಕೊಂಡಿದ್ದರು. ಬಾಂಗ್ಲಾ ಪ್ರಜೆಗಳನ್ನು ಕಳ್ಳಸಾಗಣೆ ಮೂಲಕ ಕರೆತಂದು ಭಾರತದ ಹಲವು ರಾಜ್ಯಗಳಲ್ಲಿ ಇರಿಸುತ್ತಿದ್ದರು. ಇದಕ್ಕಾಗಿ ಹಣ ಪಡೆದುಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿ, 12 ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿತ್ತು.’
‘ಜಾಲದ ಪ್ರಮುಖ ಆರೋಪಿಗಳಾಗಿದ್ದ ಸಾಜೀದ್ ಹಲ್ದಾರ್ ಹಾಗೂ ಇದ್ರಿಸ್, ತಲೆಮರೆಸಿಕೊಂಡಿದ್ದರು. ಇವರ ಬಂಧನಕ್ಕೆ ಹಲವು ದಿನಗಳಿಂದ ಪ್ರಯತ್ನಿಸಲಾಗುತ್ತಿತ್ತು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.