ADVERTISEMENT

ಮಹದೇವಪುರದಲ್ಲಿ ಇನ್ನು ಇದ್ದಿಲು ಮುಕ್ತ ಇಸ್ತ್ರಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 15:27 IST
Last Updated 5 ಜುಲೈ 2024, 15:27 IST
ಮಹದೇವಪುರದಲ್ಲಿ ಇಸ್ತ್ರಿ ಹಾಕುವ ಉದ್ಯಮ ನಡೆಸುವವರಿಗೆ ಪರಿಸರ ಸ್ನೇಹಿ ಎಲ್‌ಪಿಜಿ ಇಸ್ತ್ರಿ ಪೆಟ್ಟಿಗೆ ವಿತರಿಸಲಾಯಿತು
ಮಹದೇವಪುರದಲ್ಲಿ ಇಸ್ತ್ರಿ ಹಾಕುವ ಉದ್ಯಮ ನಡೆಸುವವರಿಗೆ ಪರಿಸರ ಸ್ನೇಹಿ ಎಲ್‌ಪಿಜಿ ಇಸ್ತ್ರಿ ಪೆಟ್ಟಿಗೆ ವಿತರಿಸಲಾಯಿತು   

ಬೆಂಗಳೂರು: ಇದ್ದಿಲು ಬಳಸಿ ಇಸ್ತ್ರಿ ಮಾಡುವ ಪದ್ಧತಿ ಮಹದೇವಪುರ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇಸ್ತ್ರಿವಾಲಾಗಳು ಎಲ್‌ಪಿಜಿ ಇಸ್ತ್ರಿ ಪೆಟ್ಟಿಗೆಗೆ ಉದ್ಯಮವನ್ನು ಬದಲಾಯಿಸಿದ್ದಾರೆ.

ಉದ್ಯಮ್‌ ಲರ್ನಿಂಗ್‌ ಫೌಂಡೇಶನ್‌ ವತಿಯಿಂದ ವೈಟ್‌ಫೀಲ್ಡ್‌ ರೈಸಿಂಗ್‌ ಸಹಯೋಗದಲ್ಲಿ ಕಲ್ಲಿದ್ದಲು ಇಸ್ತ್ರಿ ಪೆಟ್ಟಿಗೆ ಬದಲಾಯಿಸುವ ಅಭಿಯಾನವನ್ನು ಮಾಡುತ್ತಾ ಬಂದಿದ್ದು, ಕ್ಷೇತ್ರದಲ್ಲಿ ಕೊನೆಗೆ ಉಳಿದಿದ್ದ 21 ಇಸ್ತ್ರಿವಾಲಾಗಳಿಗೆ ಪರಿಸರ ಸ್ನೇಹಿ ಎಲ್‌ಪಿಜಿ ಇಸ್ತ್ರಿ ಪೆಟ್ಟಿಗೆ ವಿತರಿಸುವ ಮೂಲಕ ಶೇ 100ರಷ್ಟು ಸಾಧನೆ ಮಾಡಲಾಯಿತು ಎಂದು ಫೌಂಡೇಶನ್‌ ತಿಳಿಸಿದೆ.

ಮಹದೇವಪುರ ಕ್ಷೇತ್ರದಲ್ಲಿ ಇರುವ ನಾಲ್ಕು ನಗರಗಳಲ್ಲಿ 6,000ಕ್ಕೂ ಅಧಿಕ ಇಸ್ತ್ರಿವಾಲಾಗಳಿದ್ದಾರೆ. ಅವರನ್ನು ಇದ್ದಿಲು ಚಾಲಿತ ಇಸ್ತ್ರಿ ಪೆಟ್ಟಿಗೆಯಿಂದ ಎಲ್‌ಪಿಜಿ ಇಸ್ತ್ರಿ ಪೆಟ್ಟಿಗೆಗೆ ಬದಲಾಯಿಸಲಾಗಿದೆ. ಇದರಿಂದ ವಾರ್ಷಿಕವಾಗಿ ಅವರ ಆದಾಯ ₹30 ಕೋಟಿ ಹೆಚ್ಚಿಸಿದಂತಾಗಲಿದೆ. ಇಸ್ತ್ರಿ ಹಾಕುವವರ ಖರ್ಚು ಕಡಿಮೆಯಾಗಿ ಶೇ 25ರಷ್ಟು ಆದಾಯ ಹೆಚ್ಚಳವಾಗಿದೆ. 3,000 ಟನ್ ಇದ್ದಿಲು ಬಳಕೆ ಕಡಿಮೆಯಾಗಿರುವುದರಿಂದ ಪರಿಸರ ಮಾಲಿನ್ಯವೂ ಕಡಿಮೆಯಾಗಿದೆ. ಇಸ್ತ್ರಿವಾಲಾಗಳ ಆರೋಗ್ಯ ಹಾಳಾಗುವುದೂ ತಪ್ಪಿದೆ ಎಂದು ಮಾಹಿತಿ ನೀಡಿದೆ.

ADVERTISEMENT

ಅಭಿಯಾನದಲ್ಲಿ ವೈಟ್‌ಫೀಲ್ಡ್ ರೈಸಿಂಗ್‌ನ ನಿತ್ಯಾ ರಾಮಕೃಷ್ಣನ್, ಉದ್ಯಮ್ ಲರ್ನಿಂಗ್ ಫೌಂಡೇಶನ್‌ನ ಸಹ-ಸಂಸ್ಥಾಪಕ ಕೃಷ್ಣನ್ ರಂಗನಾಥನ್, ಎರಡೂ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.