ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಚಾಮರಾಜಪೇಟೆಯಲ್ಲಿ ನರ್ಸ್ ಒಬ್ಬರನ್ನು ಕೊಲೆ ಮಾಡಲಾಗಿದೆ.
ಚಾಮರಾಜಪೇಟೆಯ ಸೋಮಿನಿ ಸತ್ಯಭಾಮ (49) ಕೊಲೆಯಾದವರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸಾಗರ್, ಆಕಾಶ್, ಶಿವಶಂಕರ್, ಪ್ರವೀಣ್, ಪೂಜಾ ಮತ್ತು ಗಾಯತ್ರಿ ಎಂಬುವವರನ್ನು ಬಂಧಿಸಲಾಗಿದೆ.
‘ವಿಂಡ್ಸರ್ಮ್ಯಾನರ್ ಸರ್ವೀಸ್ ರೋಡ್ನಲ್ಲಿ ಜೂನ್ 11ರ ಸಂಜೆ ಆರೋಪಿಗಳಾದ ಸಾಗರ್ ಹಾಗೂ ಆಕಾಶ್ ಅವರು ಸತ್ಯಭಾಮ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಸತ್ಯಭಾಮ ಅವರ ಪುತ್ರ ಅನಿಲ್ಕುಮಾರ್ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಸತ್ಯಭಾಮ ಹಾಗೂ ಶಿವಶಂಕರ್ ಅವರು ಅಕ್ಕ– ತಮ್ಮ. ಇವರಿಗೆ ಚಾಮರಾಜಪೇಟೆಯಲ್ಲಿ ಪಿತ್ರಾರ್ಜಿತ ಆಸ್ತಿ ಇದೆ. ಅಲ್ಲದೇ ಹಲವು ಮನೆಗಳನ್ನು ಬಾಡಿಗೆಗೆ ನೀಡಿದ್ಧಾರೆ. ಆಸ್ತಿ ವಿಚಾರದಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಹೀಗಾಗಿ, ತಂಗಿ ಸತ್ಯಭಾಮ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಶಿವಶಂಕರ್ ಹತ್ಯೆ ಮಾಡುವಂತೆ ತನ್ನ ಮಕ್ಕಳಿಗೆ ಸೂಚಿಸಿದ್ದ. ಇದಕ್ಕೆ ಸಂಬಂಧಿ ಆಕಾಶ್ ಕೂಡ ಸಹಕಾರ ನೀಡಿದ್ದ’ ಎಂದು ಪೊಲೀಸರು ಹೇಳಿದರು.
ಸತ್ಯಭಾಮ ಅವರು ಐಟಿಸಿ ವಿಂಡ್ಸರ್ಮ್ಯಾನರ್ ಹೋಟೆಲ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಸರ್ವೀಸ್ ರೋಡ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಾಗರ್ ಹಾಗೂ ಆಕಾಶ್ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿದ್ದರು. ಸಾಗರ್ ಮಚ್ಚಿನಿಂದ ಸತ್ಯಭಾಮ ಅವರ ತಲೆ, ಮುಖಕ್ಕೆ ಹೊಡೆದಿದ್ದ. ಆಕಾಶ್ ಚಾಕುವಿನಿಂದ ಇರಿದಿದ್ದ. ಆನಂತರ ಅಲ್ಲಿಂದ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.