ADVERTISEMENT

ದೇಹ ಸೇರುತ್ತಿದೆ ವಿಷಾಹಾರ: ಪೌಷ್ಟಿಕ ಆಹಾರ ತಜ್ಞೆ ಡಾ.ಎಚ್.ಎಸ್. ಪ್ರೇಮಾ ಕಳವಳ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 14:35 IST
Last Updated 14 ಜುಲೈ 2024, 14:35 IST
ಡಾ. ಹೆಚ್‌.ಎಸ್‌. ಪ್ರೇಮಾ
ಡಾ. ಹೆಚ್‌.ಎಸ್‌. ಪ್ರೇಮಾ   

ಬೆಂಗಳೂರು: ‘ಆಹಾರ ವ್ಯವಸ್ಥೆಯನ್ನು ನಿಯಂತ್ರಿಸಬೇಕಾದ ಜಾಗತಿಕ ಸಂಸ್ಥೆಗಳು ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಆಹಾರದಲ್ಲಿ ರಾಸಾಯನಿಕಗಳ ಕಲಬೆರಕೆ ಹೆಚ್ಚುತ್ತಿದ್ದು, ವಿಷಾಹಾರ ನಮ್ಮ ದೇಹ ಸೇರುತ್ತಿದೆ’ ಎಂದು ಪೌಷ್ಟಿಕ ಆಹಾರ ತಜ್ಞೆ ಡಾ.ಎಚ್.ಎಸ್. ಪ್ರೇಮಾ ಕಳವಳ ವ್ಯಕ್ತಪಡಿಸಿದರು. 

ದಿ ಮಿಥಿಕ್ ಸೊಸೈಟಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಸೇವಾ ಧುರೀಣ ಕೆ.ಟಿ. ಅಪ್ಪಣ್ಣ ಸ್ಮಾರಕ ದತ್ತಿ ಉಪನ್ಯಾಸದಲ್ಲಿ, ‘ಆಹಾರಗಳಲ್ಲಿ ವಿಷ ಸೇರ್ಪಡೆ’ ಎಂಬ ವಿಷಯ ಕುರಿತು ಮಾತನಾಡಿದರು. 

‘ದ್ವಿತೀಯ ಮಹಾಯುದ್ಧದ ನಂತರ ಆಹಾರದ ಅಭಾವ ಎದುರಾಗಿದ್ದರಿಂದ ಆಹಾರ ಉತ್ಪಾದನೆಯಲ್ಲಿ ಯಾಂತ್ರೀಕರಣ ಮತ್ತು ವ್ಯಾಪಾರೀಕರಣ ಪ್ರಾರಂಭವಾಯಿತು. ಇದರ ಪರಿಣಾಮ ಹೆಚ್ಚು ಆಹಾರ ಪದಾರ್ಥಗಳನ್ನು ಉತ್ಪಾದಿಸಲು ಅತಿಯಾಗಿ ರಾಸಾಯನಿಕಗಳನ್ನು ಬಳಕೆ ಮಾಡಲಾಯಿತು. ಸಮಕಾಲೀನ ಜಗತ್ತಿನಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿ ಸಂಪೂರ್ಣ ಬದಲಾಗಿ, ಯಾಂತ್ರೀಕರಣದ ಮೂಲಕ ಆಹಾರ ವ್ಯವಸ್ಥೆಯ ನಿರ್ವಹಣೆ ಪ್ರಾರಂಭವಾಗಿದೆ. ನಿತ್ಯ ಬಳಸುತ್ತಿರುವ ಶಾಖಾಹಾರ ಮತ್ತು ಮಾಂಸಾಹಾರದಲ್ಲಿ ವಿಷದ ಪ್ರಮಾಣ ಅನಿಯಂತ್ರಿತವಾಗಿ ಹೆಚ್ಚಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಓರುಗಂಟಿ ರಾಮಚಂದ್ರಯ್ಯ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ‘ಐತಿಹಾಸಿಕ ದಾಖಲೆಗಳಾಗಿ ಜಯಪತ್ರ ಶಾಸನಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದ ರಾಜ್ಯ ಸರ್ಕಾರದ ವಸ್ತು ಸಂಗ್ರಹಾಲಯಗಳ ನಿರ್ದೇಶಕಿ ಸ್ಮಿತಾ ರೆಡ್ಡಿ, ‘ಸಾಂಸ್ಕೃತಿಕ ಇತಿಹಾಸದ ರಚನೆಯಲ್ಲಿ ಜಯಪತ್ರದ ಶಾಸನಗಳು ಮಹತ್ವದ್ದಾಗಿವೆ. ಐತಿಹಾಸಿಕ ದಾಖಲೆಗಳಾದ ಈ ಶಾಸನಗಳನ್ನು ವಿವರವಾಗಿ ಅಧ್ಯಯನ ಮಾಡಿದಾಗ ಪ್ರಾಚೀನ ಭಾರತದ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕಾನೂನಾತ್ಮಕ ಇತಿಹಾಸವನ್ನು ಮತ್ತಷ್ಟು ವಿವರವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ’ ಎಂದರು.  

ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಎಸ್. ರವಿ ಉ‍ಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.