ಬೆಂಗಳೂರು: ಇಟ್ಟಮಡು ಮುಖ್ಯರಸ್ತೆಯ ಕೃಷ್ಣಯ್ಯ ಬಡಾವಣೆಯಲ್ಲಿ ಕೃಷ್ಣ ನಾಯ್ಡು (84) ಹಾಗೂ ಪತ್ನಿ ಸರೋಜಮ್ಮ (74) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ತಮಿಳುನಾಡಿನ ಕೃಷ್ಣ ಹಾಗೂ ಸರೋಜಮ್ಮ, ಹಲವು ವರ್ಷಗಳಿಂದ ಕೃಷ್ಣಯ್ಯ ಬಡಾವಣೆಯಲ್ಲಿ ನೆಲೆಸಿದ್ದರು. ಗುರುವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ದಂಪತಿಗೆ ಮಗ ಇದ್ದಾರೆ. ಸ್ವಂತ ಕಟ್ಟಡದ ಮೊದಲ ಮಹಡಿಯಲ್ಲಿ ದಂಪತಿ ನೆಲೆಸಿದ್ದರು. ನೆಲ ಮಹಡಿಯಲ್ಲಿ ಮಗನ ಕುಟುಂಬ ವಾಸವಿತ್ತು.’
‘ದಂಪತಿ ನಡುವೆ ಪದೇ ಪದೇ ಜಗಳ ಆಗುತ್ತಿತ್ತು. ಬುಧವಾರ ರಾತ್ರಿಯೂ ಇಬ್ಬರೂ ಜಗಳ ಮಾಡುತ್ತಿದ್ದರು. ಜಗಳ ಸಾಮಾನ್ಯವೆಂದು ತಿಳಿದು ಮಗ ಹಾಗೂ ಅಕ್ಕ–ಪಕ್ಕದ ಮನೆಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಗುರುವಾರ ಬೆಳಿಗ್ಗೆ ದಂಪತಿ ಮನೆಯಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು, ಪರಿಶೀಲನೆ ನಡೆಸಿದಾಗ ಮೃತದೇಹಗಳು ಕಂಡಿದ್ದವು’ ಎಂದು ಪೊಲೀಸರು ತಿಳಿಸಿದರು.
‘ಬುಧವಾರ ರಾತ್ರಿಯೇ ದಂಪತಿ ನೇಣು ಹಾಕಿಕೊಂಡಿರುವ ಅನುಮಾನವಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿನ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲಿದೆ. ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.