ಬೆಂಗಳೂರು: ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳ ಅಸೋಸಿಯೇಷನ್ನವರೇ ಆ ಜಾಗದ ಮಾಲೀಕರಾಗುವಂತೆ ಕಾನೂನು ರೂಪಿಸುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಬಿಜೆಪಿಯ ರವಿಸುಬ್ರಹ್ಮಣ್ಯ ಅವರ ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿ, ಅಪಾರ್ಟ್ಮೆಂಟ್ ನಿರ್ಮಾಣದ ಜಾಗ ಜಮೀನಿನ ಮಾಲೀಕನ ಹೆಸರಿನಲ್ಲೇ ಇರುವುದರಿಂದ ಅನೇಕರು ಆ ಜಾಗದ ಮೇಲೆ ಸಾಲ ಪಡೆಯುತ್ತಿದ್ದಾರೆ. ಮುಂದೆ ಆ ಕಟ್ಟಡದ ಆಯಸ್ಸು ಮುಗಿದ ಮೇಲೆ, ಅಲ್ಲಿ ಮರು ನಿರ್ಮಾಣದ ವೇಳೆ ಅಲ್ಲಿ ವಾಸವಿರುವ ನಿವಾಸಿಗಳಿಗೆ ಯಾವುದೇ ಹಕ್ಕಿರುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಕಾನೂನು ತರಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಶಿವಕುಮಾರ್, ಅಕ್ರಮವಾಗಿ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸುತ್ತಿರುವವರಿಂದ ಸಮಸ್ಯೆ ಆಗುತ್ತಿದೆ ಎಂದರು.
‘ಬಹುತೇಕ ಡೆವಲಪರ್ಗಳು ಆ ರೀತಿ ಮಾಡಲು ಹೋಗುವುದಿಲ್ಲ. ನನ್ನದೇ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣದ ನಂತರ ಜಮೀನಿನ ದಾಖಲೆಗಳನ್ನು ಅಲ್ಲಿನ ನಿವಾಸಿಗಳ ಅಸೋಸಿಯೇಷನ್ಗೆ ಹಸ್ತಾಂತರ ಮಾಡುತ್ತಾರೆ. ಅಕ್ರಮವಾಗಿ ನಿರ್ಮಾಣ ಮಾಡುವವರು ಈ ರೀತಿಯ ಕೆಲಸ ಮಾಡುತ್ತಿದ್ದಾರೆ. 2016 ರ ನಂತರ ರೇರಾ ಬಂದಿದೆ. ಬೆಂಗಳೂರಿನಲ್ಲಿ ನಾವು ಆಸ್ತಿಗಳ ಸಮೀಕ್ಷೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.