ADVERTISEMENT

12 ವರ್ಷ ಸಂಗೀತ ಕಲಿಕೆಗೆ ₹63 ಗುರುದಕ್ಷಿಣೆ: ಪಂಡಿತ್‌ ವೆಂಕಟೇಶ್ ಕುಮಾರ್

‘ಬಿಕೆಫ್‌ ಪಂಡಿತ್‌ ಮಲ್ಲಿಕಾರ್ಜನ್‌ ಮನ್ಸೂರ್’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 20:38 IST
Last Updated 28 ಸೆಪ್ಟೆಂಬರ್ 2024, 20:38 IST
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಎಂ.ವೆಂಕಟೇಶ್ ಕುಮಾರ್ ಅವರಿಗೆ ‘ಬಿಕೆಎಫ್‌ ಪಂಡಿತ್‌ ಮಲ್ಲಿಕಾರ್ಜುನ್ ಮನ್ಸೂರ್ ಪ್ರಶಸ್ತಿ’ಯನ್ನು ಗುರುರಾಜ ಕರಜಗಿ ಪ್ರದಾನ ಮಾಡಿದರು. ಬೆಂಗಳೂರು ಕಿಡ್ನಿ ಫೌಂಡೇಶನ್ ಅಧ್ಯಕ್ಷ ಡಾ. ಶ್ರೀರಾಮ್, ಡಾ.ವಿವೇಕ ಜವಳಿ, ಲೋಕಾಯುಕ್ತ ಡಿಸಿಪಿ ಶ್ರೀನಾಥ್ ಜೋಶಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಎಂ.ವೆಂಕಟೇಶ್ ಕುಮಾರ್ ಅವರಿಗೆ ‘ಬಿಕೆಎಫ್‌ ಪಂಡಿತ್‌ ಮಲ್ಲಿಕಾರ್ಜುನ್ ಮನ್ಸೂರ್ ಪ್ರಶಸ್ತಿ’ಯನ್ನು ಗುರುರಾಜ ಕರಜಗಿ ಪ್ರದಾನ ಮಾಡಿದರು. ಬೆಂಗಳೂರು ಕಿಡ್ನಿ ಫೌಂಡೇಶನ್ ಅಧ್ಯಕ್ಷ ಡಾ. ಶ್ರೀರಾಮ್, ಡಾ.ವಿವೇಕ ಜವಳಿ, ಲೋಕಾಯುಕ್ತ ಡಿಸಿಪಿ ಶ್ರೀನಾಥ್ ಜೋಶಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.    

ಬೆಂಗಳೂರು: ‘ಗದಗದ ವೀರೇಶ್ವರ ಪುಣ್ಯಾಶ್ರಮದಲ್ಲಿ 12 ವರ್ಷ ಸಂಗೀತ ಅಭ್ಯಾಸ ಮಾಡಿ, ಗುರು ದಕ್ಷಿಣೆ ನೀಡಿದ್ದು ₹ 65 ಮಾತ್ರ. ಸಂಗೀತ ಕ್ಷೇತ್ರದ ಈ ಸಾಧನೆಗೆ ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳೇ ಕಾರಣ’ ಎಂದು ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್‌ ವೆಂಕಟೇಶ್ ಕುಮಾರ್ ಶನಿವಾರ ಹೇಳಿದರು.

ಬೆಂಗಳೂರು ಕಿಡ್ನಿ ಫೌಂಡೇಶನ್ (ಬಿಕೆಎಫ್‌) ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬಿಕೆಎಫ್‌ ಪಂಡಿತ್ ಮಲ್ಲಿಕಾರ್ಜುನ್‌ ಮನ್ಸೂರ್’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಪ್ರಶಸ್ತಿ ₹ 2 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.

‘ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳು ಅಂಧರಾಗಿದ್ದರೂ ಪುಣ್ಯಾಶ್ರಮದಲ್ಲಿ ಸಾವಿರಾರು ಅನಾಥ, ಅಂಧ ಮಕ್ಕಳಿಗೆ ಸಂಗೀತ ಹೇಳಿಕೊಟ್ಟಿದ್ದಾರೆ. ‘ಜಾತಿಯಲ್ಲ, ನೀತಿ ಮುಖ್ಯ’ ಎಂದು ಹೇಳುತ್ತಿದ್ದರು. ಸಂಗೀತದ ಜತೆ ಸಂಸ್ಕಾರ ಕಲಿಸಿದರು’ ಎಂದು ತಿಳಿಸಿದರು.

ADVERTISEMENT

‘ಜಾತಿ, ಧರ್ಮ ನೋಡದೆ ನೂರಾರು ಮಕ್ಕಳಿಗೆ ಗವಾಯಿಗಳು ಉಚಿತ ಊಟ ನೀಡಿ, ವಿದ್ಯೆಯನ್ನು ಧಾರೆ ಎರೆದಿದ್ದಾರೆ. ಬೆಂಗಳೂರು ಕಿಡ್ನಿ ಫೌಂಡೇಷನ್‌ಗೆ ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡಲಾಗುವುದು’ ಎಂದರು.

ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿ, ‘ಸಣ್ಣ ಪ್ರಶಸ್ತಿ ಬಂದರೂ ಕೆಲವರ ವರ್ತನೆಯಲ್ಲಿ ಬದಲಾವಣೆ ಕಾಣುತ್ತೇವೆ. ಆದರೆ ಮಲ್ಲಿಕಾರ್ಜುನ್ ಮನ್ಸೂರ್ ಅವರು ಪದ್ಮವಿಭೂಷಣ ಪ್ರಶಸ್ತಿ ಬಂದರೂ ಮಣ್ಣಿನ ವಾಸನೆ ಮರೆಯಲಿಲ್ಲ. ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’..ಎಂಬ ಅವರ ಗಾಯನ ಕೇಳಿ ಕಣ್ಣು ತುಂಬಿ ಬಂದಿತ್ತು’ ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ವೆಂಕಟೇಶ್ ಕುಮಾರ್ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.