ಬೆಂಗಳೂರು: ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆಯನ್ನು ‘ಎಕನಾಮಿಕ್ ಕಾರಿಡಾರ್’ ಮಾದರಿಯಲ್ಲಿ ಮಾರ್ಪಾಡು ಮಾಡಿ, ಯೋಜನೆಯನ್ನು ಕಾರ್ಯಗತ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಶೈಲೇಂದ್ರ ಬೆಲ್ದಾಳೆ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಶಿವಕುಮಾರ್, ಯೋಜನೆ ಸಂಬಂಧ ಫೆ. 29 ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ತಿಳಿಸಿದರು.
‘ಈ ಯೋಜನೆ ಕಾರ್ಯಗತ ಮಾಡಲು ನಿರ್ಧರಿಸಿ 15 ವರ್ಷಗಳಾಗಿವೆ. ಈ ಹಿಂದಿನ ಸರ್ಕಾರಗಳು ಏನೂ ಮಾಡಿಲ್ಲ ಎಂದು ಹೇಳುವುದಿಲ್ಲ. ಯೋಜನೆ ಆರಂಭಿಸಲು ಪ್ರಯತ್ನಪಟ್ಟಿದ್ದವು. ಆದರೆ, ಟೆಂಡರ್ನಲ್ಲಿ ಬಿಡ್ ಮಾಡಲು ಯಾರೂ ಮುಂದೆ ಬಾರದ ಕಾರಣ ಅವು ವಿಫಲವಾದವು. ಹೀಗಾಗಿ ಈಗ ಈ ಯೋಜನೆಗೆ ಹೊಸ ರೂಪ ನೀಡಿ ಪಿಪಿಪಿ ಮಾದರಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ’ ಎಂದು ಹೇಳಿದರು.
ಈ ಯೋಜನೆಗೆ 2,596 ಎಕರೆ ಜಮೀನು ಬೇಕಾಗಿದೆ. ಇದರಲ್ಲಿ 220 ಎಕರೆ ಮಾತ್ರ ಸರ್ಕಾರಿ ಜಮೀನು, ಉಳಿದದ್ದು ಖಾಸಗಿ ಜಮೀನು ಎಂದು ತಿಳಿಸಿದರು.
‘ಈ ಜಮೀನಿಗೆ ಪರಿಹಾರ ನೀಡುವ ಬಗ್ಗೆ ನ್ಯಾಯಾಲಯದ ಆದೇಶ ಇದ್ದರೂ, ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ರೈತರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. ಯೋಜನೆ ಜಾರಿ ಮಾಡುತ್ತೇವೆಯೇ ಹೊರತು ಈ ಜಾಗವನ್ನು ಡಿನೋಟಿಫೈ ಮಾಡುವುದಿಲ್ಲ. ಯೋಜನೆಗೆ ₹24 ಸಾವಿರ ಕೋಟಿ ಬೇಕಾಗಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.