ಬೆಂಗಳೂರು: ‘ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ಕೊರತೆ ಇದೆ. ಆ ಕಾರಣದಿಂದಾಗಿಯೇ ಅವರು ಯೋಜನೆಯನ್ನು ಟೀಕಿಸಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಶಕ್ತಿ ಯೋಜನೆಯಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ ಮತ್ತು ನಮ್ಮ ಮೆಟ್ರೊಗೆ ನಷ್ಟವಾಗಿದೆ ಎಂಬ ಪ್ರಧಾನಿಯವರ ಟೀಕೆಯನ್ನು ನೋಡಿ ನನಗೆ ಆಘಾತವಾಯಿತು’ ಎಂದರು.
‘ನಮ್ಮ ಮೆಟ್ರೊ ಒಂದು ವರ್ಷದಲ್ಲಿ ₹ 130 ಕೋಟಿ ಲಾಭ ಗಳಿಸಿದೆ. ನಮ್ಮ ಮೆಟ್ರೊ ಬೆಂಗಳೂರು ನಗರಕ್ಕೆ ಸೀಮಿತ. ಆದರೆ, ಶಕ್ತಿ ಯೋಜನೆ ರಾಜ್ಯದಾದ್ಯಂತ ಜಾರಿಯಲ್ಲಿದೆ. ನಿತ್ಯ 60 ಲಕ್ಷ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ’ ಎಂದರು.
‘ದೇಶದ ಹಲವು ರಾಜ್ಯಗಳು ಶಕ್ತಿ ಯೋಜನೆಯ ಕುರಿತು ಆಸಕ್ತಿ ತೋರಿವೆ. ಅಲ್ಲಿನ ಅಧಿಕಾರಿಗಳು ರಾಜ್ಯ ಸರ್ಕಾರವನ್ನು ಸಂಪರ್ಕಿಸಿ ಮಾಹಿತಿ ಪಡೆದಿವೆ. ಮೆಟ್ರೊ ರೈಲು ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ಬಂದಿರುವುದು. ಈ ಕುರಿತು ಪ್ರಧಾನಿಯವರಿಗೆ ಯಾರೂ ಸರಿಯಾದ ಮಾಹಿತಿ ನೀಡಿದಂತಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.