ಬೆಂಗಳೂರು: ‘ಹನುಮಾನ್ ಚಾಲೀಸಾ ಹಾಕಿದ್ದರಿಂದಲೇ ಗಲಾಟೆ ನಡೆದಿದ್ದರೆ ಆರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಬೇಕು. ಸರ್ಕಾರ ಅವರಿಗೆ ಯಾವುದೇ ಕಾರಣಕ್ಕೂ ರಕ್ಷಣೆ ಸಹ ಕೊಡಬಾರದು’ ಎಂದು ಕೆಪಿಸಿಸಿ ವಕ್ತಾರ ಶಂಕರ ಗುಹಾ ದ್ವಾರಕಾನಾಥ್ ಆಗ್ರಹಿಸಿದ್ದಾರೆ.
‘ಪೊಲೀಸರು ಪಕ್ಷಾತೀತವಾಗಿ ಪ್ರಕರಣದ ತನಿಖೆ ನಡೆಸಿ ಶೀಘ್ರದಲ್ಲೇ ನ್ಯಾಯ ಒದಗಿಸಬೇಕು’ ಎಂದೂ ಕೋರಿದ್ದಾರೆ.
‘ಸಂಸದ ತೇಜಸ್ವಿ ಸೂರ್ಯ ಅವರು ಐದು ವರ್ಷ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ಮಲಗಿದ್ದರು. ಈ ಕೋಮು ಗಲಭೆ ವಾಸನೆ ಬಂದಾಗ ಅವರು ಗಾಢ ನಿದ್ದೆಯಿಂದ ಎದ್ದಹಾಗೆ ಕಾಣಿಸುತ್ತಿದೆ. ಇಷ್ಟು ದಿನ ನಗರ್ತಪೇಟೆಯ ಜನರ ಯಾವುದೇ ಸಮಸ್ಯೆಗಳು ಅವರಿಗೆ ಕಂಡಿಲ್ಲ ಅನ್ನಿಸುತ್ತದೆ. ಪ್ರಚಾರಪ್ರಿಯ ಸಂಸದರು, ಈಗ ಗಲಾಟೆ ಎಂದ ತಕ್ಷಣ ತನ್ನ ಬೇಳೆ ಬೇಯಿಸುವುದಕ್ಕೆ ಸ್ಥಳಕ್ಕೆ ಬಂದಿದ್ದಾರೆ. ಅವರ ವೈಯಕ್ತಿಕ ಕಾರ್ಯಸೂಚಿಗಳಿಗೆ ಹಾಗೂ ವೈಯಕ್ತಿಕ ರಾಜಕೀಯಕ್ಕಾಗಿ ಈ ಘಟನೆ ಬಳಸುತ್ತಿದ್ದಾರೆ. ಇದು ಖಂಡನೀಯ. ಸಂಸದ ನಡೆದುಕೊಳ್ಳುವಂತಹ ರೀತಿ ಇದಲ್ಲ’ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.