ADVERTISEMENT

ಮುಂಜಾಗ್ರತೆಯಿಂದ ಡೆಂಗಿ ನಿಯಂತ್ರಣ: ಸುರಳ್ಕರ್ ವಿಕಾಸ್ ಕಿಶೋರ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:50 IST
Last Updated 17 ಸೆಪ್ಟೆಂಬರ್ 2024, 15:50 IST
ಬಿಬಿಎಂಪಿ ಆಯೋಜಿಸಿದ್ದ ‘ಡೆಂಗಿ ವಾರಿಯರ್’ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಂಗಳವಾರ ಬಹುಮಾನ ವಿತರಿಸಲಾಯಿತು
ಬಿಬಿಎಂಪಿ ಆಯೋಜಿಸಿದ್ದ ‘ಡೆಂಗಿ ವಾರಿಯರ್’ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಂಗಳವಾರ ಬಹುಮಾನ ವಿತರಿಸಲಾಯಿತು   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಡೆಂಗಿ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

ಡೆಂಗಿ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಡೆಂಗಿ ವಾರಿಯರ್’ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಂಗಳವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.

ನಗರದಲ್ಲಿ ಜುಲೈನಿಂದ ಹೆಚ್ಚು ಡೆಂಗಿ ಪ್ರಕರಣಗಳು ಕಂಡು ಬಂದವು. ಪಾಲಿಕೆ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಆರೋಗ್ಯ ವಿಭಾಗದ ಎಲ್ಲಾ ಅಧಿಕಾರಿಗಳು ಶ್ರಮಿಸಿರುವ ಪರಿಣಾಮ ಡೆಂಗಿ ನಿಯಂತ್ರಿಸಲು ಸಾಧ್ಯವಾಯಿತು ಎಂದರು.

ADVERTISEMENT

ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಸಮುದಾಯವು ಆಡಳಿತದೊಂದಿಗೆ ಕೈಜೋಡಿಸಿದರೆ ತ್ವರಿತ, ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಜಾಗೃತಿ ಮೂಡಿಸಿದರೆ ಹೆಚ್ಚು ಮಂದಿಗೆ ವಿಷಯ ತಲುಪಲಿದೆ ಎಂದು ಹೇಳಿದರು.

ಡೆಂಗಿ ನಿಯಂತ್ರಣಕ್ಕೆ ನಾಗರಿಕರು, ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ, ಯಾವ ರೀತಿ ಇತರರಿಗೆ ಅರಿವು ಮೂಡಿಸಿದ್ದಾರೆ ಎಂಬ ಬಗ್ಗೆ ಕಿರುಚಿತ್ರಗಳನ್ನು (ರೀಲ್ಸ್‌) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಲು ತಿಳಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ವಾರಿಯರ್‌ಗಳು ಭಾಗವಹಿಸಿದ್ದರು ಎಂದು ವಿಕಾಸ್‌ ಮಾಹಿತಿ ನೀಡಿದರು.

ಡೆಂಗಿ ವಾರಿಯರ್ಸ್ ಸಿದ್ಧಪಡಿಸಿದ ವಿಡಿಯೊಗಳಿಗೆ 58 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ನಾಲ್ಕು ಲಕ್ಷಕ್ಕೂ ಹೆಚ್ಚು ‘ಲೈಕ್ಸ್’ ಬಂದಿವೆ. ಬೆಸ್ಟ್ ಕ್ಲಸ್ಟರ್, ಎನ್‌ಸಿಬಿಎಸ್, ಫೋರಂ ಸೌತ್ ಮಾಲ್, ಮಂತ್ರಿ ಸ್ಕ್ವೇರ್, ನೆಕ್ಸಸ್ ಮಾಲ್ ಹಾಗೂ ಮಾಲ್ ಆಫ್ ಏಷ್ಯಾಗಳ ಸಹಯೋಗದಲ್ಲಿ  ವಿಜೇತರಿಗೆ ‘ಗಿಫ್ಟ್‌ ವೋಚರ್‌’ ನೀಡಲಾಗಿದೆ ಎಂದರು.

ಬಹುಮಾನ ವಿಜೇತರು
ಡೆಂಗಿ ಕುರಿತ ಜಾಗೃತಿ ವಿಡಿಯೊ ಮಾಡಿ ಅತಿ ಹೆಚ್ಚು ವೀಕ್ಷಣೆ ಹಾಗೂ ಲೈಕ್ಸ್‌ ಪಡೆದ 10 ಮಂದಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ತಲಾ ಐದು ಮಂದಿಗೆ ನೀಡಲಾಯಿತು. ಉಡುಪಿಯ ಜೈಸಸ್‌ ಶಾಲೆಯ ವಂದನಾ ರೈ ಗೋಲ್ಡ್‌ ಫಿಂಚ್‌ ನರ್ಸಿಂಗ್ ಕಾಲೇಜಿನ ಆರ್. ಕೊಹಿಲಾ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎ.ವಿ. ದೇವರಾಜ ಎಸ್‌.ಎಸ್‌. ಪ್ರವೀಣ ಅವರಿಗೆ ಪ‍್ರಥಮ ಪ್ರಶಸ್ತಿ ತಲಾ ₹25 ಸಾವಿರ ನಗದು ಬಹುಮಾನ ನೀಡಲಾಯಿತು. ಮಲ್ಲತ್ತಹಳ್ಳಿ ಪ್ರುಡೆನ್ಸ್‌ ಕಾಲೇಜಿನ ಅಜಯ್‌ ಅಜಯ್‌ಕುಮಾರ್‌ ಗೋಲ್ಡ್‌ ಫಿಂಚ್‌ ನರ್ಸಿಂಗ್‌ ಕಾಲೇಜಿನ ವಿ. ಐಶ್ವರ್ಯ ಶಾನಿಕಾ ಶಾನ್‌ ಎ.ಎಂ. ಮಿದ್ಲಜ್‌ ದೇವೇಶ್‌ ಅವರು ದ್ವಿತೀಯ ಪ್ರಶಸ್ತಿಯ ತಲಾ ₹10 ಸಾವಿರ ಬಹುಮಾನ ಪಡೆದರು. ವಿಡಿಯೊ ಮಾಡಲು ಹೆಚ್ಚು ಮಕ್ಕಳನ್ನು ಪ್ರೇರೇಪಿಸಿದ ಬೊಮ್ಮನಹಳ್ಳಿ ಹೊಂಗಸಂದ್ರದ ಆಕ್ಸ್‌ಫರ್ಡ್‌ ಶಾಲೆಯ  ಶಿಕ್ಷಕಿ ಚೈತ್ರಾ ಅವರಿಗೆ ₹35 ಸಾವಿರ ಹಾಗೂ ಶಿಕ್ಷಣ ಸಂಸ್ಥೆ ವಿಭಾಗದಲ್ಲೂ ಆಕ್ಸ್‌ಫರ್ಡ್‌ ಶಾಲೆಗೆ ₹1 ಲಕ್ಷ ಬಹುಮಾನ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.