ಬೆಂಗಳೂರು: ‘ಅವಕಾಶವಂಚಿತ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸುವುದಕ್ಕೆ ದುಡಿದ ಶ್ರೇಯ ಪ್ರೊ.ಕೆ.ಸಿದ್ದಪ್ಪ’ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.
ವಿಜ್ಞಾನಿ ಮತ್ತು ಪ್ರಾಧ್ಯಾಪಕ ಕೆ.ಸಿದ್ದಪ್ಪ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ, ಗೊ.ರು.ಚನ್ನಬಸಪ್ಪ ಅವರು ಅಭಿನಂದನಾ ನುಡಿಗಳನ್ನಾಡಿದರು.
‘ಸಿದ್ದಪ್ಪ ಅವರು ವಿದ್ಯಾರ್ಥಿಗಳಿಗೆ ಯಾವುದರ ಅಗತ್ಯವಿದೆ ಎಂಬುದನ್ನು ಮನಗಂಡು, ಕೆಲಸವನ್ನು ಮಾಡುತ್ತಿದ್ದರು. ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಸ್ನಾತಕೋತ್ತರ ಪದವಿ ಹಂತದಲ್ಲಿ ಮೊದಲ ಬಾರಿಗೆ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಆರಂಭಿಸಿದ್ದರು’ ಎಂದರು.
‘ಭಾರತವು ಸ್ವಾತಂತ್ರ್ಯಗೊಂಡ ನಂತರ ಮಾಡಬೇಕಿದ್ದ ಮೊದಲ ಕೆಲಸವೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವುದು. ಆದರೆ ಅಂದಿನ ನಾಯಕರು ಶಿಕ್ಷಣ ಕ್ಷೇತ್ರದಲ್ಲಿ ಕೇವಲ ಭೌತಿಕ ನಿರ್ಮಾಣಗಳಿಗೆ ಒತ್ತು ನೀಡಿದರು. ಆದರೆ ಆ ಸವಲತ್ತುಗಳನ್ನು ಬಳಸಿಕೊಳ್ಳುವಂತಹ ಯುವ ಸಮುದಾಯವನ್ನು ರೂಪಿಸಲಿಲ್ಲ. ಅಂತಹ ಯತ್ನವನ್ನು ಸಿದ್ದಪ್ಪನವರು ಮಾಡಿದರು’ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಮತ್ತು ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಹೇಳಿದರು.
‘ಈಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು (ಎನ್ಇಪಿ) ತಂದಿತ್ತು. ಆದರೆ ಆ ಶಿಕ್ಷಣ ನೀತಿ ಕುರಿತಾಗಿ ಅನಗತ್ಯವಾದ ಭಿನ್ನಾಭಿಪ್ರಾಯಗಳನ್ನು ರೂಪಿಸಿ, ವಿರೋಧಿಸಲಾಯಿತು. ಅದು ವಿಷಾದನೀಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.