ಬೆಂಗಳೂರು: ‘ಪೌರ ಕಾರ್ಮಿಕರಿಗೆ ರಕ್ಷಣೆ ಒದಗಿಸುವುದು ಪೊಲೀಸರ ಜವಾಬ್ದಾರಿ ಹಾಗೂ ಕರ್ತವ್ಯ. ಪೌರ ಕಾರ್ಮಿಕರಿಗೆ ಯಾವುದಾರೂ ಸಮಸ್ಯೆ ಬಂದರೆ ತಮ್ಮ ವ್ಯಾಪ್ತಿಯ ಠಾಣೆಯನ್ನು ಸಂಪರ್ಕಿಸಿದರೆ ಪೊಲೀಸರು ನೆರವು ಕಲ್ಪಿಸಲಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಹೇಳಿದರು.
ಉತ್ತರ ವಿಭಾಗದ ಪೊಲೀಸರ ನೇತೃತ್ವದಲ್ಲಿ ಭೂಪಸಂದ್ರದಲ್ಲಿ ಶನಿವಾರ ಆಯೋಜಿಸಿದ್ದ ತಿಂಗಳ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
‘ನಗರದ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ದೊಡ್ಡದಿದೆ. ಅವರು ಕರ್ತವ್ಯ ನಿರ್ವಹಣೆ ವೇಳೆ ತೊಂದರೆಗೆ ಒಳಗಾದರೆ ತಕ್ಷಣವೇ ಸ್ಪಂದಿಸಲಾಗುತ್ತಿದೆ’ ಎಂದರು.
ಡ್ರಗ್ಸ್ ನಿರ್ಮೂಲನೆ: ‘ನಗರದಲ್ಲಿ ಡ್ರಗ್ಸ್ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ. ನಗರದಲ್ಲಿ ಯಾವುದೇ ಮೂಲೆಯಲ್ಲಿ ಡ್ರಗ್ಸ್ ಮಾರಾಟ, ಸರಬರಾಜು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದ ವ್ಯಕ್ತಿಯ ಹೆಸರು ಗೋಪ್ಯವಾಗಿ ಇಟ್ಟು ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.
‘ಪೊಲೀಸ್ ಠಾಣೆಗೆ ತೆರಳಲು ಸಾಧ್ಯವಾಗದ ಸಂದರ್ಭಗಳಲ್ಲಿ ತಿಂಗಳ ಸಭೆಗೆ ಬಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದೇವೆ. ಸಭೆಯಲ್ಲಿ ಪ್ರಸ್ತಾಪಿಸಿದ ಕೆಲವು ಸಮಸ್ಯೆಗಳು ಹಾಗೆಯೇ ಉಳಿಯುತ್ತಿವೆ. ಬೇಗನೆ ಪರಿಹಾರ ದೊರಕಿಸಿಕೊಡಬೇಕು’ ಎಂದು ಸಾರ್ವಜನಿಕರೊಬ್ಬರು ಕೋರಿದರು. ಇದೇ ವೇಳೆ ಪ್ರತಿ ಠಾಣೆಯಲ್ಲೂ ಮಹಿಳಾ ಕೌನ್ಸಿಲ್ನ ಅಗತ್ಯವಿದೆ ಎಂದೂ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ದಯಾನಂದ ಅವರು, ನಗರದ ಪ್ರತಿ ವಿಭಾಗದಲ್ಲೂ ಮಹಿಳಾ ಠಾಣೆಗಳು ಇರುತ್ತವೆ. ಅಲ್ಲಿ ಕೌನ್ಸಿಲ್ ಸಹ ಇರುತ್ತಾರೆ. ಮಹಿಳಾ ಸಿಬ್ಬಂದಿ ಇರುತ್ತಾರೆ. ಅವರಿಗೆ ಸಮಸ್ಯೆ ತಿಳಿಸಬಹುದು ಎಂದು ಹೇಳಿದರು.
ನಗರದಲ್ಲಿ ಸಂಚಾರ ಸುಧಾರಣೆಗೆ ಹಲವು ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.