ಬೆಂಗಳೂರು: ನಗರ ಉತ್ತರ ಭಾಗದಲ್ಲಿ ಸೋಮವಾರ ಅತಿಹೆಚ್ಚು ಮಳೆಯಾಗಿ ಬಳ್ಳಾರಿ ರಸ್ತೆಯ ಎಲಿವೇಟೆಡ್ ಎಕ್ಸ್ಪ್ರೆಸ್ವೇನಲ್ಲಿ ಮಳೆನೀರು ನಿಂತು ಮೂರು ಗಂಟೆ ವಾಹನ ದಟ್ಟಣೆ ಉಂಟಾಗಿತ್ತು.
ಮಳೆ ನೀರಿನ ಜೊತೆಗೆ ಕಾರು ಹಾಗೂ ಬಿಎಂಟಿಸಿ ಬಸ್ ಕೆಟ್ಟು ನಿಂತದ್ದು ಇನ್ನಷ್ಟು ದಟ್ಟಣೆ ಉಂಟು ಮಾಡಿತು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾ ನಿಲ್ದಾಣ ಎಲಿವೇಟೆಡ್ ಕಾರಿಡಾರ್ನಲ್ಲಿ ಕೊಡಿಗೆಹಳ್ಳಿ ಸಮೀಪ ಮಳೆನೀರು ಹರಿಯದೆ ರಸ್ತೆಯ ಮೇಲೇ ನಿಂತುಕೊಂಡಿತ್ತು. ಸುಮಾರು ಒಂದು ಅಡಿಯಷ್ಟು ನೀರು ನಿಂತಿದ್ದರಿಂದ ವಾಹನ ಸಂಚಾರ ಸುಗಮಗೊಳಿಸಲು ಸಂಚಾರ ಪೊಲೀಸರು ಹರಸಾಹಸಪಟ್ಟರು.
ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳಲ್ಲಿ 118 ವಾರ್ಡ್ಗಳಲ್ಲಿ ಸೋಮವಾರ ಮಳೆಯಾಯಿತು. ಜಕ್ಕೂರು , ರಾಧಾಕೃಷ್ಣ ದೇವಸ್ಥಾನ, ಅರಮನೆ ನಗರದಲ್ಲಿ ತಲಾ 2.6 ಸೆಂ.ಮೀ, ವಿದ್ಯಾರಣ್ಯಪುರ, ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೇಹಳ್ಳಿಯಲ್ಲಿ ತಲಾ 2.1 ಸೆಂ.ಮೀ, ಕುವೆಂಪುನಗರ, ದಾಸರಹಳ್ಳಿ, ಶೆಟ್ಟಿಹಳ್ಳಿ, ಜಾಲಹಳ್ಳಿ, ಸಂಪಂಗಿರಾಮನಗರ, ಶಾಂತಲಾನಗರದಲ್ಲಿ ತಲಾ 1.9 ಸೆಂ.ಮೀ, ಶಾಂತಿನಗರ, ಬಿನ್ನಿಪೇಟೆಯಲ್ಲಿ ತಲಾ 1.6 ಸೆಂ.ಮೀ ಮಳೆಯಾಗಿದೆ.
ರಾಜರಾಜೇಶ್ವರಿನಗರ, ನಾಯಂಡಹಳ್ಳಿ, ಕೆಂಗೇರಿ, ಹಂಪಿನಗರ, ಬೊಮ್ಮನಹಳ್ಳಿ, ಹೆಮ್ಮಿಗೆಪುರ, ಸಿಂಗಸಂದ್ರ, ಹೊಂಗಸಂದ್ರ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯಾಯಿತು. ಹೆಬ್ಬಾಳ ಮೇಲ್ಸೇತುವೆ, ಕೆಳಭಾಗ, ಜಯಮಹಲ್, ರಾಮಮೂರ್ತಿನಗರ, ಬಳ್ಳಾರಿ ರಸ್ತೆಯ ಸಂಜಯನಗರ ಕ್ರಾಸ್, ವಿಂಡ್ಸರ್ ಮ್ಯಾನರ್ ಸೇತುವೆ, ಕ್ವೀನ್ಸ್ ರಸ್ತೆ, ಬಿನ್ನಿಮಿಲ್ನಿಂದ ಹುಣಸೇಮರದ ಕಡೆಯ ರಸ್ತೆ, ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗೆ, ಕೆಂಪಾಪುರ ಜಂಕ್ಷನ್ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.