ಬೆಂಗಳೂರು: ಜಲಮಿತ್ರ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, 30 ದಿನಗಳಲ್ಲಿ 9 ಸಾವಿರಕ್ಕೂ ಹೆಚ್ಚು ಜನರು ಜಲಮಿತ್ರರಾಗಿ ನೋಂದಣಿಯಾಗಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ.ವಿ. ರಾಮ್ಪ್ರಸಾತ್ ಮನೋಹರ್ ತಿಳಿಸಿದರು.
ಜಲಮಿತ್ರರಿಗಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಜಲಮಿತ್ರರಿಗೆ ವಲಯವಾರು ತರಬೇತಿ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಇವರು ‘ವಾಟರ್ ಸರ್ಪ್ಲಸ್ ಬೆಂಗಳೂರು’ ಅಭಿಯಾನದ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ನೀರು ಉಳಿಸಿ - ಬೆಂಗಳೂರು ಬೆಳೆಸಿ’ ಅಭಿಯಾನದ ಭಾಗವಾಗಿ ಜಲಮಿತ್ರ ನೊಂದಣಿಗೆ ಮಾರ್ಚ್ 14 ರಂದು ಚಾಲನೆ ನೀಡಲಾಗಿತ್ತು ಎಂದು ವಿವರಿಸಿದರು.
ನೀರಿನ ಪ್ರಾಮುಖ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ಜಲಮಂಡಳಿಯ ಜನಸ್ನೇಹಿ ಕಾರ್ಯಕ್ರಮಗಳು ಮತ್ತು ನೀರು ಸರಬರಾಜು, ಒಳಚರಂಡಿ ನಿರ್ವಹಣೆ, ನೀರು ಸಂರಕ್ಷಣೆ, ಮಳೆ ನೀರು ಸಂಗ್ರಹ ಮುಂತಾದ ಚಟುವಟಿಕೆಗೆ ಸಂಬಂಧಿಸಿ ಜಾಗೃತಿ ಮೂಡಿಸಲು ಸ್ವಯಂ ಸೇವಕರಾಗಿ ಕೆಲಸ ಮಾಡುವವರನ್ನು ಜಲಮಿತ್ರರನ್ನಾಗಿ ನೇಮಿಸುವ ಅಭಿಯಾನ ಇದಾಗಿದೆ. ಸಂಸ್ಕರಿಸಿದ ತ್ಯಾಜ್ಯ ನೀರಿನ ಮರುಬಳಕೆ, ಸಾರ್ವಜನಿಕರಿಂದ ನೀರು ವ್ಯರ್ಥವಾಗುವ ವಿವರಗಳನ್ನು ಸಂಗ್ರಹಿಸುವುದು, ಒಳಚರಂಡಿ ಸಮಸ್ಯೆಗಳು, ನೀರಿನ ಸಂಗ್ರಹ ಸಂಪ್ಗಳು ಮತ್ತು ಟ್ಯಾಂಕ್ಗಳಿಂದ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಯುವುದು. ಇದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಜಲಮಿತ್ರರ ಕರ್ತವ್ಯ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ವೆಂಕಟೇಶ್, 500ಕ್ಕೂ ಹೆಚ್ಚು ಜಲಮಿತ್ರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.