ಬೆಂಗಳೂರು: ‘ನಿಜದ ನೆಲೆಯ ಅರಿತು, ಲೋಕಕ್ಕೆ ಉಪಕಾರಿಯಾದ ಕಾರ್ಯಗಳನ್ನು ಮಾಡಿ, ಅರವತ್ತೆಂಟು ಸಾವಿರ ವಚನಗಳ ಹಾಡಿ ಕನ್ನಡ ನಾಡಿನಾದ್ಯಂತ ಸಂಚರಿಸಿದ ನಿಜಯೋಗಿ ಸಿದ್ದರಾಮರು’ ಎಂದು ಸಾಮಾಜಿಕ ಹೋರಾಟಗಾರ್ತಿ ಕೆ.ಆರ್. ಸೌಮ್ಯಾಗೌಡ ಹೇಳಿದರು.
ವಚನಜ್ಯೋತಿ ಬಳಗವು ಜ್ಞಾನಭಾರತಿ ಸೊಣ್ಣೇನಹಳ್ಳಿಯ ರಂಗಹನುಮಯ್ಯ ಬಯಲು ಮಂಟಪದಲ್ಲಿ ಆಯೋಜಿಸಿದ್ದ ‘ವಚನ ಸಂಕ್ರಾಂತಿ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಬಸವಣ್ಣನವರ ನೇತೃತ್ವದಲ್ಲಿ ನಡೆದ ವಿಚಾರ ಕ್ರಾಂತಿಯಲ್ಲಿ ಸಿದ್ದರಾಮರು ತಮ್ಮ ಕರ್ಮಯೋಗವ ಬಿಟ್ಟು ಕೈಲಾಸವೆಂಬುದು ಹಾಳು ಬೆಟ್ಟ ಎಂದು ಹೇಳಿದವರು. ಉತ್ತರ ಕರ್ನಾಟಕದ ಕುಡು ಒಕ್ಕಲಿಗರು, ಮಧ್ಯ ಕರ್ನಾಟಕದ ನೊಳಂಬ ಲಿಂಗಾಯತರು, ಬಹು ಸಂಖ್ಯಾತರಾದ ಕುರುಬರು ಹಾಗೂ ಭೋವಿ ಸಮುದಾಯದವರು ಸಿದ್ದರಾಮರ ಅಖಂಡ ಅನುಯಾಯಿಗಳು’ ಎಂದು ಮಾಹಿತಿ ನೀಡಿದರು.
ಪಂಪನಗೌಡ ಮೇಲ್ಸೀಮೆ ಮಾತನಾಡಿ, ‘ಸಂಕ್ರಾಂತಿಯ ನೆಪದಲ್ಲಿ ವಚನಗಳನ್ನು ಆಲಿಸುವುದು, ಸಿದ್ದರಾಮರಂತಹ ಶಿವಯೋಗಿಗಳ ಸ್ಮರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ವಚನಜ್ಯೋತಿ ಬಳಗದ ಪಿನಾಕಪಾಣಿ ಮಾತನಾಡಿ, ‘ಮಕ್ಕಳ ವಚನ ಮೇಳ- 2024’ ಅನ್ನು ಜೂನ್ನಲ್ಲಿ ಮತ್ತಷ್ಟು ವಿಶೇಷತೆಗಳೊಂದಿಗೆ ಆರಂಭಿಸಲಾಗುವುದು ಎಂದು ಹೇಳಿದರು.
ಗಾಯಕರಾದ ಸಿದ್ದರಾಮ ಕೇಸಾಪುರ, ರವೀಂದ್ರ ಸೊರಗಾವಿ, ಪಂಡಿತ ದೇವೇಂದ್ರಕುಮಾರ ಪತ್ತಾರ್, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಶರ್ವಾಣಿ, ಗೀತಾ ಭತ್ತದ್, ಪೂರ್ಣಿಕ, ದಿಶಾ, ಶ್ರಾವಣಿ, ಶಾರ್ವಿ, ಸೋನಾಕ್ಷಿ, ಶ್ರೇಷ್ಠ, ಆದಿತ್ಯ ವಚನಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.