ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 0:00 IST
Last Updated 18 ಸೆಪ್ಟೆಂಬರ್ 2024, 0:00 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಅವರ ಆಪ್ತೆ ಪವಿತ್ರಾಗೌಡ ಸೇರಿದಂತೆ 17 ಮಂದಿಯ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಮಂಗಳವಾರ ಆದೇಶಿಸಿತು.

ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗಿದ್ದರಿಂದ ಆರೋಪಿಗಳನ್ನು ಕಾರಾಗೃಹದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

ಇದೇ ವೇಳೆ ತನಿಖಾಧಿಕಾರಿಗಳು, ತಾಂತ್ರಿಕ ಸಾಕ್ಷ್ಯಾಧಾರ ಹಾಗೂ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯದ (ಸಿಎಫ್‌ಎಸ್‌ಎಲ್‌) ಉಳಿದ ವರದಿಗಳನ್ನು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ಹೆಚ್ಚಿನ ತನಿಖೆಗಾಗಿ ಆರೋಪಿ ವಿನಯ್‌ ಅವರ ಮೊಬೈಲ್ ಅನ್ನು ಸಿಎಫ್ಎಸ್‌ಎಲ್‌ಗೆ ಕಳುಹಿಸಲು ಅನುಮತಿ ನೀಡುವಂತೆಯೂ ತನಿಖಾಧಿಕಾರಿಗಳ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿ ನೀಡಿದರು.

ADVERTISEMENT

‘ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ ಅವರಿಗೆ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸುತ್ತಿಲ್ಲ. ಅವರಿರುವ ಬ್ಯಾರಕ್‌ನಲ್ಲಿ ಕುರ್ಚಿ ಸಹ ಇಲ್ಲ. ದರ್ಶನ್‌ ಭೇಟಿಗೆ ಅವರ ಪತ್ನಿ, ಸಹೋದರ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಮೂಲಸೌಕರ್ಯ ಕಲ್ಪಿಸಲು ಜೈಲಾಧಿಕಾರಿಗಳಿಗೆ ಸೂಚಿಸಬೇಕು’ ಎಂದು ದರ್ಶನ್‌ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ಆಗ ಜೈಲಾಧಿಕಾರಿಗಳನ್ನು ಪ್ರಶ್ನಿಸಿದ ನ್ಯಾಯಾಧೀಶರು, ಆರೋಪಿಗಳ ಕುಟುಂಬದ ಸ್ನೇಹಿತರಿಗೆ ಭೇಟಿಗೆ ಅವಕಾಶ ನೀಡಬೇಕು. ಅಲ್ಲದೇ ಆರೋಪಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆದೇಶಿಸಿ, ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿದರು.

ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್‌ ಭೇಟಿ

ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ ದರ್ಶನ್‌ ಅವರನ್ನು ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್‌, ಸಂಬಂಧಿಕರಾದ ಹೇಮಂತ್ ಮತ್ತು ಸುಶಾಂತ್ ನಾಯ್ಡು ಮಂಗಳವಾರ ಸಂಜೆ 4.30 ರಿಂದ 5ರವರೆಗೆ ಬಳ್ಳಾರಿ ಕಾರಾಗೃಹದಲ್ಲಿ ಭೇಟಿಯಾದರು. ಸುದ್ದಿಗಾರರ ಜೊತೆ ಮಾತನಾಡಲು ನಿರಾಕರಿಸಿದರು. 

ವಿಜಯಲಕ್ಷ್ಮಿ ಅವರು ಬಟ್ಟೆ ಮತ್ತು ತಿಂಡಿ ತಿನಿಸುಗಳು ಇದ್ದ ಎರಡು ಚೀಲಗಳನ್ನು ತಂದಿದ್ದರು. ಸಂದರ್ಶಕರ ಕೊಠಡಿಗೆ ಬರುವಾಗ ಮತ್ತು ಮರಳುವಾಗ, ದರ್ಶನ್ ಕೈಯಲ್ಲಿ ಎರಡು ಚೀಲಗಳಿದ್ದವು.

‘ಬಳ್ಳಾರಿ ಕಾರಾಗೃಹದಲ್ಲಿ ರಕ್ತಸಂಬಂಧಿಕರು ಹೊರತುಪಡಿಸಿ ಬೇರೆಯವರನ್ನು ಭೇಟಿಯಾಗಲು ದರ್ಶನ್‌ಗೆ ಅವಕಾಶವಿಲ್ಲ’ ಎಂದು ಕಾರಾಗೃಹ ಉತ್ತರ ವಲಯದ ಡಿಐಜಿ ಟಿ.ಪಿ.ಶೇಷ ಹೇಳಿದ್ದರು. ಆದರೆ, ಜೈಲು ಮಾರ್ಗಸೂಚಿಯಂತೆ ಸ್ನೇಹಿತರು, ಹಿತೈಷಿಗಳ ಭೇಟಿಗೆ ಅವಕಾಶ ನೀಡಲು ನ್ಯಾಯಾಲಯ ಮಂಗಳವಾರ ತಿಳಿಸಿದ ಕಾರಣ ಧನ್ವೀರ್ ಮತ್ತು ಹೇಮಂತ್ ಅವರಿಗೆ ಭೇಟಿಯಾಗಲು ಸಾಧ್ಯವಾಯಿತು.

ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ, ಜಾಮೀನು ಅರ್ಜಿ ಸಲ್ಲಿಕೆ ಸೇರಿ ಕಾನೂನು ಹೋರಾಟದ ಬಗ್ಗೆ ಪತ್ನಿ ಜತೆಗೆ ದರ್ಶನ್‌ ಚರ್ಚಿಸಿದರು. ಭೇಟಿಗೆ ತಾಯಿ ಬಾರದಿರುವ ಬಗ್ಗೆ ದರ್ಶನ್‌ ಬೇಸರ ವ್ಯಕ್ತಪಡಿಸಿದರು ಎಂಬುದು ಗೊತ್ತಾಗಿದೆ. ಆದರೆ, ಇದನ್ನು ಕಾರಾಗೃಹದ ಅಧಿಕಾರಿಗಳು ಖಚಿತಪಡಿಸಲಿಲ್ಲ.

‘ಬೆಂಗಳೂರು ಕಾರಾಗೃಹದಿಂದ ಬರುವಾಗ ದರ್ಶನ್‌ ವಿಟಮಿನ್‌ ಮಾತ್ರೆಗಳನ್ನು ತಂದಿದ್ದರು. ಭೇಟಿ ವೇಳೆ ಕುಟುಂಬಸ್ಥರೂ ತಂದಿದ್ದರು. ಆದರೆ, ಅದ್ಯಾವುದನ್ನೂ ದರ್ಶನ್‌ಗೆ ನೀಡಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.